Publish Date: Wed, 17 Jul 2024 (11:08 IST)
Updated Date: Wed, 17 Jul 2024 (11:14 IST)
ಬೆಂಗಳೂರು: ಖಾಸಗಿ ಸಂಸ್ಥೆಗಳಿಗೆ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡುವ ಮಹತ್ವದ ಮಸೂದೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದು ಕನ್ನಡಿಗರ ಬಹುದಿನಗಳ ಕನಸು ನನಸಾದ ಕ್ಷಣವಾಗಿದೆ. ಈ ಯೋಜನೆಯ ಸಂಪೂರ್ಣ ವಿವರ ಇಲ್ಲಿದೆ.
ಕೈಗಾರಿಕೆಗಳು, ಕಾರ್ಖಾನೆಗಳು ಮತ್ತು ಇತರ ಉದ್ಯಮ ಸಂಸ್ಥೆಗಳಲ್ಲಿ ಸ್ಥಳೀಯ ಅಭ್ಯರ್ಥಿಗಳಿಗೆ ಆದ್ಯತೆ ನೀಡುವ ಕರ್ನಾಟಕ ರಾಜ್ಯ ಉದ್ಯೋಗ ಮಸೂದೆ 2024 ಗುರುವಾರ ವಿಧಾನಸಭೆಯಲ್ಲಿ ಮಂಡನೆಯಾಗಿದೆ. ಅದರಂತೆ ಇನ್ನು ಮುಂದೆ ಯಾವುದೇ ಕಾರ್ಖಾನೆ, ಉದ್ಯಮ ಅಥವಾ ಇನ್ನಿತರ ಖಾಸಗಿ ಸಂಸ್ಥೆಗಳಲ್ಲಿ ನಿರ್ವಹಣಾ ವಿಭಾಗಗಳಲ್ಲಿ ಶೇ. 50 ರಷ್ಟು ಮತ್ತು ನಿರ್ವಹಣೇತರ ವಿಭಾಗದಲ್ಲಿ ಶೇ.75 ರಷ್ಟು ಸ್ಥಳೀಯರಿಗೆ ಮೀಸಲಾತಿ ನೀಡಬೇಕು ಎಂದು ನಿಯಮ ರೂಪಿಸಲಾಗಿದೆ.
ಯಾರೆಲ್ಲಾ ಅರ್ಹರು?
ಕರ್ನಾಟಕದಲ್ಲಿ ಕಳೆದ ಶಾಶ್ವತವಾಗಿ ಹುಟ್ಟಿ ಬೆಳೆದವರು ಅಥವಾ ಕಳೆದ 15 ವರ್ಷಗಳಿಂದ ಇಲ್ಲಿಯೇ ನೆಲೆಸಿ ಕನ್ನಡ ಓದಲು, ಬರೆಯಲು ಬರುವ ವ್ಯಕ್ತಿಗಳಿಗೆ ಈ ಮೀಸಲಾತಿ ಸಿಗಲಿದೆ. ಒಂದು ವೇಳೆ ಕನ್ನಡದಲ್ಲಿ ಓದಿದ ಬಗ್ಗೆ ಶಾಲಾ ಪ್ರಮಾಣ ಪತ್ರವಿಲ್ಲದಿದ್ದರೂ ನೋಡಲ್ ಏಜೆನ್ಸಿ ನಿರ್ದಿಷ್ಟಪಡಿಸಿದ ಕನ್ನಡ ಪ್ರಾವಿಣ್ಯ ಪರೀಕ್ಷೆಯಲ್ಲಿ ಪಾಸಾಗಿರಬೇಕು. ಒಂದು ವೇಳೆ ತಮ್ಮ ಸಂಸ್ಥೆಗೆ ತಕ್ಕ ಪ್ರಾವೀಣ್ಯತೆಯಿರುವ ಅಭ್ಯರ್ಥಿಗಳು ಸ್ಥಳೀಯವಾಗಿಲ್ಲದಿದ್ದರೆ ನಿಯಮ ಸಡಿಲಿಸುವಂತೆ ಸರ್ಕಾರಕ್ಕೆ ಮನವಿ ಮಾಡಬಹುದು.
ನಿಯಮ ಉಲ್ಲಂಘಿಸಿದರೆ ಬೀಳುತ್ತೆ ದಂಡ
ಒಂದು ವೇಳೆ ಸರ್ಕಾರದ ಈ ಮೀಸಲಾತಿ ನಿಯಮ ಉಲ್ಲಂಘಿಸಿದರೆ ಅಂತಹ ಸಂಸ್ಥೆಗಳಿಗೆ 10 ಸಾವಿರ ರೂ.ಗಳಿಂದ 25 ಸಾವಿರ ರೂ.ಗಳವರೆಗೆ ದಂಡ ವಿಧಿಸಬಹುದಾಗಿದೆ. ನಂತರವೂ ನಿಯಮ ಉಲ್ಲಂಘಿಸಿದರೆ ಮತ್ತಷ್ಟು ದಂಡ ತೆರಬೇಕಾಗುತ್ತದೆ. ಇಂತಹ ಕಠಿಣ ನಿಯಮದಿಂದ ಸ್ಥಳೀಯರಿಗೆ ಉದ್ಯೋಗ ನೀಡಿದಂತಾಗುತ್ತದೆ ಮತ್ತು ನಿರುದ್ಯೋಗ ಸಮಸ್ಯೆಯೂ ನಿವಾರಣೆಯಾದಂತಾಗುತ್ತದೆ.