Publish Date: Thu, 19 Mar 2020 (19:49 IST)
Updated Date: Thu, 19 Mar 2020 (19:52 IST)
ಕೊರೊನಾ ವೈರಸ್ ತಡೆಗಟ್ಟೋಕೆ ಅಂತ ಇದೀಗ ಪ್ರಾದೇಶಿಕ ಆಯುಕ್ತರೇ ಫಿಲ್ಡಿಗೆ ಇಳಿದಿದ್ದಾರೆ.
ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಡಾ. ಎನ್.ವಿ.ಪ್ರಸಾದ ಅವರು ಕಲಬುರಗಿ ನಗರದ ಜನದಟ್ಟಣೆ ಪ್ರದೇಶಗಳಾದ ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ಶರಣಬಸವೇಶ್ವರ ದೇವಸ್ಥಾನ ಹಾಗೂ ಖಾಜಾ ಬಂದೇನವಾಜ್ ದರ್ಗಾ ಸೇರಿದಂತೆ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಕೊರೋನಾ ವೈರಸ್ ಹರಡದಂತೆ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳನ್ನು ಪರಿಶೀಲಿಸಿದರು.
ಕಲಬುರಗಿ ನಗರದ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಕೊರೋನಾ ವೈರಸ್ ಸೋಂಕು ಪರೀಕ್ಷೆಗೆ ಒಳಪಡಿಸುವುದನ್ನು ತೀವ್ರಗೊಳಿಸಬೇಕು ಹಾಗೂ ಥರ್ಮಲ್ ಸ್ಕ್ಯಾನ್ ವ್ಯವಸ್ಥೆಯನ್ನು ಕಡ್ಡಾಯಗೊಳಿಸಬೇಕೆಂದು ಕಲಬುರಗಿ ಜಿಲ್ಲಾಧಿಕಾರಿಗಳಿಗೆ ಹಾಗೂ ಪೊಲೀಸ್ ಉಪ ಆಯುಕ್ತರಿಗೆ ಸೂಚಿಸಿದ್ದಾರೆ.
ಕಲಬುರಗಿ ಮುಖ್ಯ ಬಸ್ನಿಲ್ದಾಣದಲ್ಲಿ ಪ್ರತ್ಯೇಕವಾಗಿ ಒಳ ಮತ್ತು ಹೊರ ಪ್ರವೇಶ ದ್ವಾರಗಳನ್ನು ತಾತ್ಕಾಲಿಕವಾಗಿ ಸ್ಥಾಪಿಸಿಬೇಕೆಂದರು.
ಗುಲಬರ್ಗಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಜಿಮ್ಸ್) ಆಸ್ಪತ್ರೆಯಲ್ಲಿ ಐಸೋಲೇಷನ್ ವಾರ್ಡ್ನಲ್ಲಿರುವ ವ್ಯಕ್ತಿಗಳಿಗೆ ಪೂರೈಸುತ್ತಿರುವ ಊಟದ ವ್ಯವಸ್ಥೆ ಸುಧಾರಿಸಬೇಕು, ಪೌಷ್ಠಿಕ ಆಹಾರಕ್ಕೆ ಕ್ರಮ ಜರುಗಿಸಬೇಕು. ವೆಂಟಿಲೇಟರ್ ವ್ಯವಸ್ಥೆ ಅಧಿಕಗೊಳಿಸಬೇಕೆಂದು ಕಲಬುರಗಿ ಜಿಮ್ಸ್ ಆಸ್ಪತ್ರೆಯ ನಿರ್ದೇಶಕರಿಗೆ ತಿಳಿಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಈ ಕುರಿತು ತೆಗೆದುಕೊಂಡ ಕ್ರಮಗಳ ಕುರಿತು ಅನುಪಾಲನಾ ವರದಿ ಸಲ್ಲಿಸಬೇಕೆಂದು ಅವರು ಸೂಚಿಸಿದ್ದಾರೆ.