Select Your Language

Notifications

webdunia
webdunia
webdunia
webdunia

ಪಡ್ಡೆಹುಡುಗ-ಹುಡುಗಿಯರ ಅಡ್ಡಾದಿಡ್ಡಿ ಬೈಕ್ ಸವಾರಿ - ಲಗಾಮು ಯಾವಾಗ?

ಪಡ್ಡೆಹುಡುಗ-ಹುಡುಗಿಯರ ಅಡ್ಡಾದಿಡ್ಡಿ ಬೈಕ್ ಸವಾರಿ - ಲಗಾಮು ಯಾವಾಗ?
ಬೆಂಗಳೂರು , ಬುಧವಾರ, 13 ಫೆಬ್ರವರಿ 2019 (14:03 IST)
ವೀಣಾ ಗಿರೀಶ್.....

ಇತ್ತೀಚಿನ ದಿನಗಳಲ್ಲಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ಎರ್ರಾಬಿರ್ರಿಯಾಗಿ ವಾಹನ ಓಡಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ನಗರದ ಬಹುತೇಕ ರಸ್ತೆಗಳಲ್ಲಿ ಪಡ್ಡೆಹುಡುಗರು ಲಂಗು ಲಗಾಮಿಲ್ಲದೆ ಅತಿವೇಗದಲ್ಲಿ ವಾಹನಗಳನ್ನು ಚಲಾಯಿಸುವುದರಿಂದ ಇತರ ಸವಾರರು ರಸ್ತೆಯಲ್ಲಿ ಓಡಾಡಲು ಹೆದರುವ ಪರಿಸ್ಥಿತಿ ನಿರ್ಮಾಣವಾದೆ. ಎಷ್ಟೋ ಜನ ಮಹಿಳೆಯರು ಮಕ್ಕಳು ಮತ್ತು ವೃದ್ದರು ಇಂತಹವರ ದುಸ್ಸಾಹಸದಿಂದ ಬಲಿಯಾಗುತ್ತಿದ್ದಾರೆ. 
ಸಮಾಜದ ಸ್ವಾಸ್ಥ್ಯವನ್ನು ಕಾಪಾಡಬೇಕಾದ ಈ ಯುವಜನತೆ ಇಂದು ಈ ತರಹದ ಕಯಾಲಿಯನ್ನು ಅಳವಡಿಸಿಕೊಂಡಿರುವುದು ನಿಜಕ್ಕೂ ಶೋಚನಿಯವೇ ಸರಿ. ಅದರಲ್ಲೂ ಮೆಟ್ರೋ ಪಾಲಿಟಿನ್ ಸಿಟಿಗಳಲ್ಲಿ, ಹುಡುಗಿಯರ ಕಾಲೇಜುಗಳ ಮುಂದೆ ಇಂತಹ ಸಾಹಸ ಪ್ರದರ್ಶನಗಳನ್ನು ನಾವು ದಿನನಿತ್ಯವು ನೋಡುತ್ತಲೇ ಇರುತ್ತೇವೆ ಆದರೆ ಅದಕ್ಕೆ ಲಗಾಮು ಹಾಕಲು ಇಂದಿಗೂ ಸಾಧ್ಯವಾಗಿಲ್ಲ ಎಂಬುದು ನಮ್ಮ ವಿಫಲತೆಯನ್ನು ತೋರಿಸುತ್ತದೆ.
 
ಏನಾಗಿದೆ ಇವರಿಗೆ, ಸ್ವಲ್ಪವೂ ಭಯವಿಲ್ಲವೇ ಪ್ರಾಣದ ಮೇಲೆ ಆಸೆಯನ್ನು ಬಿಟ್ಟು ಬರೀ ಷೋಕಿಗಾಗಿ ಹುಚ್ಚುಕುದುರೆಯಂತೆ ಓಡಿಸುವುದರಿಂದ ಇವರಿಗಾಗುವ ಲಾಭವಾದರೂ ಏನು ಎಂಬುದರ ಕುರಿತು ಯೋಚಿಸಿದಾಗ ಅದು ಉತ್ತರ ಸಿಗದ ಪ್ರಶ್ನೆಯಾಗಿಯೋ ಉಳಿದಿದೆ. ಅದರಲ್ಲೂ ಇತ್ತಿಚೀಗೆ ತಮ್ಮ ಬೈಕುಗಳಿಗೆ ವಿಶೇಷವಾಗಿರುವ ಸೈಲೆನ್ಸರ್ ಅನ್ನು ಅಳವಡಿಸಿ ದೊಡ್ಡ ಶಬ್ದದೊಂದಿಗೆ ಸವಾರಿ ಮಾಡುವುದು ಇಂದಿನ ಫ್ಯಾಶನ್ ಆಗಿಬಿಟ್ಟಿದೆ ಅದರಿಂದ ವಯಸ್ಸಾದವರಿಗೋ ಇಲ್ಲವೇ ಹೃದಯ ಸಂಬಂಧಿ ಕಾಯಿಲೆಯಿಂದ ಕೂಡಿರುವವರಿಗೆ ತೊಂದರೆ ಆಗಬಹುದು ಎಂಬುದರ ಕುರಿತು ಕನಿಷ್ಟ ಸೌಜನ್ಯವು ಇಲ್ಲದೇ ನಡೆದುಕೊಳ್ಳುತ್ತಿರುವುದನ್ನು ನೋಡಿದರೆ ನಮ್ಮ ಶಿಕ್ಷಣ ಪದ್ಧತಿ ಅದೇ ನಾವು ಹೇಳಿಕೊಳ್ಳುವ ಸೋ ಕಾಲ್ಡ್ ಹೈ ಪ್ರೊಫೈಲ್ ಶಿಕ್ಷಣದ ಮಹಿಮೆಯೇ ಎಂದು ತಲೆ ಕೆರೆದುಕೊಳ್ಳುವ ಪರಿಸ್ಥಿತಿ ಇಂದಿನ ಸಮಾಜದಾಗಿದೆ.
 
ಇದು ಹುಡುಗರಿಗಷ್ಟೇ ಸಿಮೀತವಾಗಿಲ್ಲ ಇಂದು ಹುಡುಗಿಯರು ಸಹ ಎಲ್ಲಾ ಕ್ಷೇತ್ರದಲ್ಲಿ ಮುಂದುವರೆದಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ ಹಾಗಾಗೀ ಇವರು ಸಹ ಇಂತಹ ದುಸ್ಸಾಹಸಗಳಿಗೆ ತಮ್ಮನ್ನು ತಾವು ತೊಡಗಿಸಿಕೊಂಡಿರುವುದನ್ನು ನಾವು ಮಾಧ್ಯಮಗಳಲ್ಲಿ ನೋಡುತ್ತಲೇ ಇರುತ್ತೇವೆ. ಅದಕ್ಕಾಗಿ ಕೆಲವು ರಸ್ತೆ ನಿಯಮಗಳನ್ನು ಮಾಡಿದರು ಅದನ್ನು ಮೀರಿ ಈ ರೀತಿಯ ಸವಾರಿಗಳನ್ನು ಮಾಡುತ್ತಿರುವುದನ್ನು ನೋಡಿದರೆ ನಮ್ಮ ಕಾನೂನು ವ್ಯವಸ್ಥೆಯ ಮೇಲೆ ಅಂತಹ ವ್ಯಕ್ತಿಗಳಿಗೆ ಯಾವುದೇ ಭಯವಿಲ್ಲ ಎಂಬುದು ಇಲ್ಲಿ ಸ್ಪಷ್ಟವಾಗಿ ತೋರುತ್ತದೆ. ಇದಕ್ಕಾಗಿ ಸರ್ಕಾರ ಮತ್ತು ಪೊಲೀಸ್ ಇಲಾಖೆ ಶತಾಯಗತಾಯ ಹತೋಟಿಗೆ ತರಲು ಪ್ರಯತ್ನಿಸುತ್ತಿದ್ದರು  ಇಂತಹ ಕೆಲವೇ ಕೆಲವು ಮನಸ್ಥಿಯ ಯುವಕರು ಮತ್ತು ಯುವತಿಯರಿಂದ ಇನ್ನಷ್ಟು ಕ್ರೇಜ್ ಹೆಚ್ಚಾಗುತ್ತಿದ್ದು ಸರಕಾರ ಮತ್ತು ಪೊಲೀಸ್ ಇಲಾಖೆಯ ಯಾವ ಪ್ರಯತ್ನಗಳು ಅವುಗಳನ್ನು ಹತ್ತಿಕ್ಕಲು ಇದುವರೆಗೂ ಸಾಧ್ಯವಾಗಿಲ್ಲ ಎನ್ನುವುದೇ ದುರಂತ.
 
ಅದರಲ್ಲೂ ಗಾಭರಿಪಡುವ ಇನ್ನೊಂದು ವಿಷಯವೇನೆಂದರೆ 18 ವರ್ಷದೊಳಗಿನವರಿಗೆ ಚಾಲನಾ ಪರವಾನಿಗೆಯನ್ನು ನೀಡಲಾಗುವುದಿಲ್ಲ ಆದರೂ ಅಪ್ರಾಪ್ತರು ಬೈಕ್ ಓಡಿಸುತ್ತಾರೆ, ಅದು ಯಾವುದೇ ಭಯವಿಲ್ಲದೇ ಇದನ್ನೆಲ್ಲಾ ಗಮನಿಸಿದಾಗ ನಾವು ವ್ಯವಸ್ಥೆಯ ವಿರುದ್ಧ ಮಾತನಾಡುವ ಮೊದಲು ಪಾಲಕರಾದವರು ತಮ್ಮ ಜವಾಬ್ದಾರಿಗಳನ್ನು ಸರಿಯಾಗಿ ನಿರ್ವಹಿಸುತ್ತಿದ್ದಾರೆಯೇ ಎಂಬುದು ಇಲ್ಲಿ ನಾವು ಗಮನಿಸಬೇಕಾದ ಮುಖ್ಯ ಅಂಶವಾಗಿದೆ ಇಲ್ಲಿ ಅಪ್ರಾಪ್ತರು ಮಾಡುವ ತಪ್ಪಿಗೆ ಪಾಲಕರೇ ನೇರ ಹೊಣೆಗಾರರಾಗಿರುತ್ತಾರೆ ಹೊರತು ಬೇರ್ಯಾರು ಅಲ್ಲ.
 
ಬಡ್  ಬಡ್ ಶಬ್ದ ಮಾಡುವ ಬುಲೆಟ್ ಬೈಕ್ ಮೇಲೆ ಕುಳಿತು ಸವಾರಿ ಮಾಡುವುದು ಎಲ್ಲಾ ಪಡ್ಡೆ ಹುಗುಗರ ಕನಸು, ಆದರೆ ಸುಮಾರು ವರ್ಷಗಳಿಂದ ಕಣ್ಮಕೆಯಾಗಿದ್ದ ಬುಲೆಟ್ ಬೈಕ್ ಮತ್ತೆ ರಸ್ತೆ ಮೇಲೆ ಕಾಣುತ್ತಿದೆ, ಇದರಿಂದಾಗಿ ಎಷ್ಟೊಂದು ಶಬ್ದಮಾಲಿನ್ಯವಾಗುತ್ತದೆಯೆಂದು ಅವರು ಕಿಂಚಿತ್ತು ಯೋಚನೆ ಮಾಡುವುದಿಲ್ಲ. ಅತಿವೇಗದ ಚಾಲನೆ, ಹೆಲ್ಮೆಟ್ ಧರಿಸದಿರುವುದು, ತ್ರಿಬಲ್ ರೈಡಿಂಗ್, ಅತಿ ಹೆಚ್ಚಿನ ಶಬ್ದ ಉಂಟುಮಾಡುವ ಸೈಲೆನ್ಸರ್ ಬಳಕೆ, ಕರ್ಕಶವಾದ ಹಾರನ್, ಮೊಬೈಲ್ ಫೋನ್‌ನಲ್ಲಿ ಮಾತನಾಡುತ್ತಲೇ ಬೈಕ್ ಚಾಲನೆ ಮಾಡುವುದು, ಸೈಡ್ ಮಿರರ್ ಇಲ್ಲದಿರುವುದು- ಈ ರೀತಿಯ ಸಂಚಾರ ನಿಯಮಗಳನ್ನು ಗಾಳಿಗೆ ತೂರಿಕೊಂಡು ತಮ್ಮನ್ನು ತಾವು ತೊಂದರೆಗೆ ಗುರಿಮಾಡಿಕೊಳ್ಳುವುದಲ್ಲದೇ ಅಮಾಯಕರಿಗೂ ಇದರಿಂದ ತೊಂದರೆ ಉಂಟುಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂಬುದನ್ನು ಇಂದಿನ ಯುವ ಜನತೆ ತಮ್ಮನ್ನು ತಾವೇ ಪ್ರಶ್ನಿಸಿಕೊಳ್ಳಬೇಕಾಗಿದೆ.
 
ನಗರದಲ್ಲಿ ಪೋಲೀಸರ ಭಯ ಸ್ವಲ್ಪವೂ ಇಲ್ಲದೇ ಅಪ್ರಾಪ್ತ ವಯಸ್ಸಿನ ಹುಡುಗ ಹಾಗೂ ಹುಡುಗಿಯರು ತಮ್ಮ ಮನೆಯಿಂದ ಶಾಲಾ-ಕಾಲೇಜು ಹಾಗೂ ಟ್ಯುಷನ್‌ಗೆ ತೆರಳಲು ಸ್ಕೂಟಿ, ಮೊಪೆಡ್‌ಗಳನ್ನು ಅತಿವೇಗದಿಂದ ಓಡಿಸುವುದು ಇತ್ತೀಚಿನ ದಿನಗದಳಲ್ಲಿ ಕಂಡುಬರುತ್ತಿದೆ. ಬೇಕಾಬಿಟ್ಟಿಯಾಗಿ ಗಾಡಿಯನ್ನು ಓಡಿಸುತ್ತ ತಮ್ಮ ಕೈಯಾರೆ ಅಪಘಾತಕ್ಕೆ ತಮ್ಮನ್ನು ಆಹ್ವಾನಿಸಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಎಷ್ಟೋ ಸಹ ಪ್ರಯಾಣಿಕರು ಅಪಾಯಗಳಿಗೆ ಒಳಗಾಗುತ್ತಾರೆ ಎನ್ನುವ ಪರಿಜ್ಞಾನವಿಲ್ಲದೆ ವಾಹನ ಚಲಾಯಿಸುವವರಿಗೆ ಯಾವಾಗ ಬುದ್ದಿಬರುತ್ತದೆಯೋ ಆ ದೇವರೆ ಬಲ್ಲ.
 
ಪೋಷಕರು ಇಂತಹ ದುರ್ಘಟನೆಗಳು ನಡೆಯದಂತೆ ತಮ್ಮ ಮಕ್ಕಳಿಗೆ ತಿಳುವಳಿಕೆ ನೀಡಬೇಕು. ಪೋಷಕರಿಗೂ ತಿಳಿಯದಂತೆ ಎಷ್ಟೋ ಸಲ ಅಪಘಾತಗಳನ್ನು ಮಾಡಿ ಪೋಷಕರ ಮೇಲೆ ಭಾರ ಹೊರೆಸುವ ಮೂಲಕ ನಮ್ಮದೆ ಕುಟುಂಬಕ್ಕೆ ನಾವು ಮುಳ್ಳಾಗುವುದು ಎಷ್ಟರ ಮಟ್ಟಿಗೆ ಸರಿ ಎಂಬುದನ್ನು ಸ್ವಲ್ಪ ಯೋಚಿಸಬೇಕಾಗಿದೆ ಈ ಸಮಾಜ ನಮ್ಮೆಲ್ಲರ ಆಸ್ತಿ ಅದನ್ನು ಸ್ವಾಸ್ಥತೆಯಿಂದ ಕಾಪಾಡಿಕೊಳ್ಳುವುದು ನಮ್ಮೆಲ್ಲರ ಹೊಣೆ ಎಂಬುದನ್ನು ಯುವಜನತೆ ಮರೆಯಬಾರದು.
 
 

Share this Story:

Follow Webdunia kannada

ಮುಂದಿನ ಸುದ್ದಿ

ಪ್ರೀತಿಯಲ್ಲಿ ಮೋಸ ಹೋದ ಯುವತಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ