Publish Date: Wed, 13 Mar 2024 (14:34 IST)
Updated Date: Wed, 13 Mar 2024 (14:36 IST)
ಬೆಂಗಳೂರು: ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ ಐಎ ಅಧಿಕಾರಿಗಳು ಮೊಹಮ್ಮದ್ ಶಬ್ಬೀರ್ ಎಂಬಾತನನ್ನು ಅರೆಸ್ಟ್ ಮಾಡಿದ್ದಾರೆ.
ಈತ ಬಳ್ಳಾರಿ ಮೂಲದವನು ಎನ್ನಲಾಗಿದೆ. ಇಂದು ಮುಂಜಾನೆ ಆತನನ್ನು ಬಂಧಿಸಲಾಗಿದ್ದು, ಬೆಂಗಳೂರಿಗೆ ಹೆಚ್ಚಿನ ವಿಚಾರಣೆಗೆ ಕರೆದುಕೊಂಡು ಬರಲಾಗುತ್ತಿದೆ. ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣಕ್ಕೆ ಸಂಬಂದಿಸಿದಂತೆ ಆರೋಪಿಯ ಸುಳಿವು ನೀಡಿದವರಿಗೆ 10 ಲಕ್ಷ ರೂ. ಬಹುಮಾನ ನೀಡುವುದಾಗಿ ಎನ್ ಐಎ ಘೋಷಣೆ ಮಾಡಿತ್ತು.
ಇದೀಗ ಬಂಧಿತನಾಗಿರುವ ಶಬ್ಬೀರ್ ತೋರಣಗಲ್ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಈತನಿಗೂ ರಾಮೇಶ್ವರಂ ಸ್ಪೋಟಕ್ಕೂ ನಂಟಿರಬಹುದು ಎಂದು ಶಂಕಿಸಲಾಗಿದೆ. ಮಾರ್ಚ್ 01 ರಂದು ಸುಮಾರು 9 ಗಂಟೆಗೆ ಈತ ಶಂಕಿತ ಉಗ್ರನನ್ನು ಭೇಟಿಯಾಗಿದ್ದ. ಹೀಗಾಗಿ ಈತನ ಮೇಲೆ ಸಂಶಯ ಹೆಚ್ಚಾಗಿದೆ.
ಬಳ್ಳಾರಿ ಹೊಸ ಬಸ್ ನಿಲ್ದಾಣದಿಂದ ಬುಡಾ ಕಾಂಪ್ಲೆಕ್ಸ್ ಬಳಿ ಆಟೋದಲ್ಲಿ ಬಂದಿಳಿದು ಶಂಕಿತ ಉಗ್ರನನ್ನು ಈತ ಭೇಟಿಯಾಗಿದ್ದ. ಶಬ್ಬೀರ್ ನ ಅಣ್ಣನ ಮಕ್ಕಳಿಂದ ಬಾಂಬರ್ ನ ಪರಿಚಯವಾಗಿತ್ತು ಎನ್ನಲಾಗಿದೆ. ಇದೀಗ ಸಿಸಿಟಿವಿ ದೃಶ್ಯದ ಆಧಾರದ ಮೇಲೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಶಂಕಿತ ಉಗ್ರ ನೆರೆಯ ಹೈದರಾಬಾದ್ ನಲ್ಲಿ ತಲೆಮರೆಸಿಕೊಂಡಿರಬಹುದು ಎಂದು ಶಂಕಿಸಲಾಗಿದೆ.