Publish Date: Fri, 03 May 2024 (15:02 IST)
Updated Date: Fri, 03 May 2024 (15:06 IST)
ಬೆಂಗಳೂರು: ದೇಶವನ್ನು 10 ವರ್ಷಗಳ ಕಾಲ ಸರ್ವತೋಮುಖ ಅಭಿವೃದ್ಧಿಯತ್ತ ಒಯ್ದ ನರೇಂದ್ರ ಮೋದಿಯವರು ಸಮರ್ಥ ನಾಯಕ. ದೇಶ, ಬಡವರಿಗೆ ಒಳ್ಳೆಯದು ಮಾಡಿದ್ದಾರೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ತಿಳಿಸಿದರು.
ಬೀದರ್ನಲ್ಲಿ ರೆಡ್ಡಿ ಸಮುದಾಯದ ಸಾರ್ವಜನಿಕ ಸಭೆಯಲ್ಲಿ ಇಂದು ಮಾತನಾಡಿದ ಅವರು, ಇಲ್ಲಿನ ಕಾಂಗ್ರೆಸ್ ಅಭ್ಯರ್ಥಿಗೆ ರಾಹುಲ್ ಗಾಂಧಿಯವರಂತೆ ಸಮಸ್ಯೆಗಳ ಅರಿವಿಲ್ಲ ಎಂದು ಟೀಕಿಸಿದರು. ಭಗವಂತ ಖೂಬಾ ಅವರು ಜನರ ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸಿದ್ದಾರೆ. ಜನಮೆಚ್ಚುಗೆ ಗಳಿಸಿದ್ದಾರೆ ಎಂದು ವಿಶ್ಲೇಷಿಸಿದರು.
ರೈತ ಯೋಜನೆಗಳು, ಅಭಿವೃದ್ಧಿಗೆ ಸಂಸತ್ತಿನಲ್ಲಿ ಮನವಿ ಮಾಡಲು ಬಿಜೆಪಿಯ ಸಮರ್ಥ ಅಭ್ಯರ್ಥಿ ಆಯ್ಕೆ ಮಾಡಿ ಎಂದು ವಿನಂತಿಸಿದರು. ಫಲಿತಾಂಶ ಬಂದ ಬಳಿಕ ರಾಹುಲ್ ಗಾಂಧಿಯವರು ವಿದೇಶಕ್ಕೆ ಓಡಿ ಹೋಗಲಿದ್ದಾರೆ. ಯಾಕೆಂದರೆ ಫಲಿತಾಂಶ ಈಗಾಗಲೇ ಗೊತ್ತಾಗಿದೆ ಎಂದು ತಿಳಿಸಿದರು.
ದೇಶದ ಭವಿಷ್ಯ, ಸುರಕ್ಷತೆ, ಅಭಿವೃದ್ಧಿಗೆ ಮೋದಿಜೀ, ಬಿಜೆಪಿ ಆಯ್ಕೆ ಅನಿವಾರ್ಯ. ಕಾಂಗ್ರೆಸ್ ಪಕ್ಷ ಈ ದೇಶಕ್ಕೆ ಒಳ್ಳೆಯದು ಮಾಡಿಲ್ಲ. 50 ವರ್ಷಕ್ಕೂ ಹೆಚ್ಚು ಕಾಲ ಆಳ್ವಿಕೆ ನಡೆಸಿದರೂ ದೇಶಕ್ಕೆ ಅಭಿವೃದ್ಧಿ ತಂದಿಲ್ಲ ಎಂದು ಆಕ್ಷೇಪಿಸಿದರು. ಮೋದಿಜೀ ಅವರ ನೇತೃತ್ವದಲ್ಲಿ ದೇಶದ ಸರ್ವತೋಮುಖ ಅಭಿವೃದ್ಧಿ ಆಗಿದೆ. ಖೂಬಾ ಅವರ ಮೂಲಕ ಮೋದಿಯವರಿಗೆ ನಿಮ್ಮ ಮತ ಕೊಡಿ ಎಂದು ವಿನಂತಿಸಿದರು.
ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ಮಾತನಾಡಿ, ಮೋದಿ ಮೋದಿ ಎಂದು ಘೋಷಣೆ ಕೂಗಿದವರಿಗೆ ಕಪಾಳಕ್ಕೆ ಹೊಡೆಯಿರಿ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ತಂಗಡಗಿ ಹೇಳಿದ್ದಾರೆ. ಅದು ಖಂಡನೀಯ ಎಂದರು. ಇದು ಭಾರತದ ಸಂಸ್ಕಾರ, ಸಂಸ್ಕøತಿಯಲ್ಲ ಎಂದು ನುಡಿದರು. ಮೋದಿ ಮೋದಿ ಎಂದು ಸ್ಮರಣೆ ಮಾಡಿ ಖೂಬಾರಿಗೆ ಮತ ಕೊಡಿ ಎಂದು ವಿನಂತಿಸಿದರು.
ಮೋದಿಯವರು ಜಾತಿ, ಮತ ಭೇದವಿಲ್ಲದೆ ಅಭಿವೃದ್ಧಿಯತ್ತ ದೇಶವನ್ನು ಕೊಂಡೊಯ್ದಿದ್ದಾರೆ. ಆದರೂ ಅವರ ಕುರಿತು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಟೀಕಿಸಿದರು. ಜಮ್ಮು- ಕಾಶ್ಮೀರದಲ್ಲಿ 370ನೇ ವಿಧಿ ರದ್ದು ಮಾಡಿ ಪ್ರಶಾಂತ ಪರಿಸ್ಥಿತಿ ನಿರ್ಮಿಸಿದ್ದನ್ನು ಪ್ರಸ್ತಾಪಿಸಿದರು.