Publish Date: Thu, 14 Apr 2022 (09:24 IST)
Updated Date: Thu, 14 Apr 2022 (08:41 IST)
ಹಾಸನ : ದೇವಾಲಯದಲ್ಲಿ ಹಿಂದಿನಿಂದ ನಡೆದುಕೊಂಡು ಬಂದ ರೂಢಿ, ಸಂಪ್ರದಾಯ, ಪದ್ಧತಿಗಳನ್ನು ಮೀರಲು ಅಧಿಕಾರವಿರುವುದಿಲ್ಲ ಎಂದು ಧಾರ್ಮಿಕದತ್ತಿ ಇಲಾಖೆ ಸ್ಪಷ್ಟಪಡಿಸಿದೆ.
ಬೇಲೂರು ಚನ್ನಕೇಶವಸ್ವಾಮಿ ಜಾತ್ರಾ ಮಹೋತ್ಸವದ ತೇರಿನ ದಿನ ಕುರಾನ್ ಪಠಣೆ ಮಾಡುವ ವಿಚಾರವಾಗಿ ಎದ್ದಿರುವ ವಿವಾದಕ್ಕೆ ಇಲಾಖೆ ಸ್ಪಷ್ಟನೆ ನೀಡಿದೆ.
ತೇರಿನ ದಿನ ಕುರಾನ್ ಪಠಣೆ ಮಾಡುವ ವಿಚಾರ ನಮ್ಮ ಕೈಪಿಡಿಯಲ್ಲೇ ಇದೆ. ಗಳಿಗೆ ತೇರಿನ ದಿನ ದೇವಾಲಯದ ಬಳಿ ನಿಂತು ಕುರಾನ್ ಪಠಣೆ ಮಾಡಲಾಗುತ್ತದೆ. ಪ್ರತಿ ವರ್ಷವೂ ಅದು ನಡೆದುಕೊಂಡು ಬಂದಿದೆ. ಆದರೆ ಈ ವರ್ಷ ಸ್ವಲ್ಪ ಚರ್ಚೆಗಳಾಗುತ್ತಿವೆ.
ಹೀಗಾಗಿ ಗಳಿಗೆ ತೇರಿನ ದಿನ (ಚಿಕ್ಕತೇರು) ಕುರಾನ್ ಪಠಣೆ ನಡೆಯುವುದರ ಬಗ್ಗೆ ಆಯುಕ್ತರಾದ ರೋಹಿಣಿ ಸಿಂಧೂರಿಯವರ ಗಮನಕ್ಕೆ ತಂದಿದ್ದೇನೆ. ಅವರ ನಿರ್ದೇಶನದ ನಿರೀಕ್ಷೆಯಲ್ಲಿದ್ದೇವೆ ಎಂದು ಹೇಳಿದ್ದರು.
ಇದೀಗ ಈ ಬಗ್ಗೆ ಧಾರ್ಮಿಕದತ್ತಿ ಇಲಾಖೆ ಸ್ಪಷ್ಟನೆ ನೀಡಿದೆ. ದೇವಾಲಯದಲ್ಲಿ ಹಿಂದಿನಿಂದ ಬಂದಿರುವ ರೂಢಿ, ಸಂಪ್ರದಾಯ, ಪದ್ಧತಿಯನ್ನು ಮೀರಲು ಅಧಿಕಾರ ಇರುವುದಿಲ್ಲ.
ಈ ಕಾರಣ ಸದರಿ ದೇವಾಲಯದಲ್ಲಿ ವಾರ್ಷಿಕ ಬ್ರಹ್ಮರಥೋತ್ಸವವನ್ನು ಆಗಮಶಾಸ್ತ್ರ ರೀತಿ ಹಾಗೂ ಹಿಂದಿನಿಂದ ನಡೆದುಬರುತ್ತಿರುವ ರೂಢಿಯಲ್ಲಿರುವ ಸಂಪ್ರದಾಯ ಪದ್ಧತಿಯಂತೆ ನಡೆಸಲು ಸೂಚಿಸಬಹುದಾಗಿರುತ್ತದೆ ಎಂದು ಆಯುಕ್ತರ ಪರವಾಗಿ ಧಾರ್ಮಿಕ ದತ್ತಿ ಇಲಾಖೆ ಸೂಚಿಸಿದೆ.