Publish Date: Mon, 25 Jul 2022 (15:18 IST)
Updated Date: Mon, 25 Jul 2022 (15:21 IST)
ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಕುಪ್ಪಂ ಮಂಡಲಂನ ಗುಡಿವಂಕ ಕಾವಡಿ ಉತ್ಸವ ನಡೆದಿದೆ. ಈ ಉತ್ಸವದಲ್ಲಿ ಅಪ್ಪು ಅಭಿಮಾನಿಗಳು ಪುನೀತ್ ರಾಜ್ಕುಮಾರ್ ಅವರ ದೊಡ್ಡ ಭಾವಚಿತ್ರ ಹಿಡಿದು ಕ್ರೇನ್ನಲ್ಲಿ ಕಾವಡಿ ಸಲ್ಲಿಸುವ ಮೂಲಕ ನೆಚ್ಚಿನ ನಟನನ್ನ ನೆನಪಿಸಿಕೊಂಡಿದ್ದಾರೆ. ಇದೊಂದೇ ಅಲ್ಲ ಶಿವಮೊಗ್ಗದಲ್ಲಿ ನಡೆದ ಜಾತ್ರೆಯಲ್ಲಿ ಸಹ ಅಭಿಮಾನಿಗಳು ಅಪ್ಪು ಫೋಟೋ ಹಿಡಿದುಕೊಂಡು ದೇವರ ದರ್ಶನ ಪಡೆದಿದ್ದಾರೆ.
ಪುನೀತ್ ರಾಜಕುಮಾರ್ ಅಭಿಮಾನಿಗಳು ಮಾತ್ರ ಅವರ ಫೋಟೋವನ್ನೇ ಜೊತೆಯಲ್ಲಿ ಇಟ್ಟುಕೊಂಡು ದೇಗುಲಕ್ಕೆ ಹೋಗಿ, ದೇವರ ದರ್ಶನ ಪಡೆದಿದ್ದಾರೆ. ಈ ಜಾತ್ರೆಯಲ್ಲಿ ಹಲವಾರು ಅಪ್ಪು ಅಭಿಮಾನಿಗಳು, ಪುನೀತ್ ರಾಜ್ಕುಮಾರ್ ಅವರ ಫೋಟೋವನ್ನು ತಮ್ಮ ಜೊತೆ ಹೊತ್ತುಕೊಂಡು ಹೋಗಿದ್ದಾರೆ.
ಪುನೀತ್ ರಾಜಕುಮಾರ್ ಅಕಾಲ ಮರಣ ಹೊಂದಿದ ಬಳಿಕ ಪ್ರತಿನಿತ್ಯ ರಾಜ್ಯದ ಒಂದಲ್ಲಾ ಒಂದು ಹಳ್ಳಿ ಗ್ರಾಮಗಳಲ್ಲಿ ಅವರ ಹೆಸರಲ್ಲಿ ಪುಣ್ಯ ಕಾರ್ಯಗಳು ನಡೆಯುತ್ತದೆ. ಅದೆಷ್ಟೋ ಜನರು ಪ್ರತಿನಿತ್ಯ ಪುನೀತ್ ಹೆಸರು ಹೇಳಿಕೊಂಡು ಹಸಿದವರಿಗೆ ಅನ್ನ ಸಂತರ್ಪಣೆ ಮಾಡುತ್ತಿದ್ದಾರೆ. ಅಲ್ಲದೇ ಹಲವಾರು ರಸ್ತೆಗಳಿಗೆ ಪುನೀತ್ ಹೆಸರನ್ನು ಸಹ ಇಡಲಾಗಿದೆ. ಬೆಂಗಳೂರಿನಲ್ಲಿ ನಾಯಂಡಹಳ್ಳಿಯಿಂದ ಬನ್ನೇರುಘಟ್ಟದವರೆಗಿನ ರಸ್ತೆಗೆ ಪುನೀತ್ ಹೆಸರು ಇಡುವಂತೆ ಅಭಿಮಾನಿಗಳು ಮನವಿ ಸಲ್ಲಿಸಿದ್ದರು. ಇದಕ್ಕೆ ಬಿಬಿಎಂಪಿ ಸ್ಪಂದಿಸಿ, ರಸ್ತೆಗೆ ಪುನೀತ್ ರಾಜ್ಕುಮಾರ್ ರಸ್ತೆ ಎಂದು ಹೆಸರಿಟ್ಟಿದೆ.