Publish Date: Thu, 05 May 2022 (13:41 IST)
Updated Date: Thu, 05 May 2022 (13:57 IST)
ಪಿಎಸ್ ಐ ನೇಮಕಾತಿ ಅಕ್ರಮ ಪ್ರಕರಣವನ್ನು 15 ದಿನದಲ್ಲಿ ಮುಚ್ಚಿ ಹಾಕುತ್ತಾರೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಬಾಂಬ್ ಸಿಡಿಸಿದ್ದಾರೆ.
ಬೆಂಗಳೂರಿನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಬಿಜೆಪಿ ಸರಕಾರದಲ್ಲಿ ಕೇಳಿ ಬಂದ ಗಾಂಜಾ ಪ್ರಕರಣ, ಲಾಟರಿ ದಂಧೆ ಸೇರಿದಂತೆ ಹಲವು ಪ್ರಕರಣಗಳು ಏನಾದವು? ಇದೇ ರೀತಿ ಪಿಎಸ್ ಐ ಅಕ್ರಮ ನೇಮಕಾತಿ ಪ್ರಕರಣ ಕೂಡ ಮುಚ್ಚಿ ಹಾಕುವ ಪ್ರಯತ್ನಗಳು ನಡೆದಿವೆ ಎಂದರು.
ಕಾಂಗ್ರೆಸ್ ಆರಂಭಿಸಿದ ಭ್ರಷ್ಟಾಚಾರವನ್ನು ಬಿಜೆಪಿ ಮುಂದುವರಿಸುತ್ತಿದೆ. ಆದ್ದರಿಂದ ರಾಷ್ಟ್ರೀಯ ಪಕ್ಷಗಳನ್ನು ಹೊರಗೆ ಇಡುವ ಕಾಲ ಬಂದಿದೆ ಎಂದು ಅವರು ಹೇಳಿದರು.
ಕಾಂಗ್ರೆಸ್ ಸರ್ಕಾರದಲ್ಲಿ ಕೆಪಿಎಸ್ ಸಿ ಶುದ್ಧ ಮಾಡ್ತೀವಿ ಅಂತ ಹೇಳಿದ್ದರು. ಕೆಪಿಎಸ್ಸಿಯನ್ನು ಓಪನ್ ಮಾರುಕಟ್ಟೆ ಮಾಡಿದ್ದರು. ಡಿವೈಎಸ್ ಪಿ ಹುದ್ದೆಗೆ ಇಷ್ಟು ಅಂತ ಫಿಕ್ಸ್ ಮಾಡಿದ್ದರು. ಈಗ ಅವರಿಗೆ ಹಣ ಹಿಂತಿರುಗಿಸಿಲ್ಲ. ಆದ್ದರಿಂದ ನೈತಿಕತೆ ಬಗ್ಗೆ ಮಾತನಾಡಲು ಎರಡೂ ಪಕ್ಷಗಳಿಗೆ ಹಕ್ಕಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.