Publish Date: Tue, 15 Nov 2022 (17:25 IST)
Updated Date: Tue, 15 Nov 2022 (17:28 IST)
ಪಿಎಸ್ಐ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿ ಚಿತ್ತಾಪುರ ತಾಲೂಕಿನ ಕರದಾಳ ಗ್ರಾಮದ ಡಾ ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಶಂಕ್ರಪ್ಪ ಬಸಪ್ಪ ಹನಮಗೊಂಡ (32) ಎಂಬಾತನನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ಈತ ಪ್ರಮುಖ ಆರೋಪಿ ಆರ್.ಡಿ. ಪಾಟೀಲನ ನಿಕಟವರ್ತಿ. ಅಭ್ಯರ್ಥಿಗಳನ್ನು ಹುಡುಕುವುದಲ್ಲದೆ, ಹಣಕಾಸಿನ ವ್ಯವಹಾರವೂ ಮಾಡುತ್ತಿದ್ದ. ಬದಲಿಗೆ ಪ್ರಶ್ನೆಪತ್ರಿಕೆ ಕೈಗೆ ಸಿಗುತ್ತಿದ್ದಂತೆ ಅಭ್ಯರ್ಥಿಗಳಿಗೆ ಬ್ಲೂಟೂತ್ ಬಳಕೆ ಮಾಡಿ ಉತ್ತರಗಳನ್ನು ಹೇಳುತ್ತಿದ್ದ ಎಂದು ಆರೋಪಿಸಲಾಗಿದೆ. ಜೇವರ್ಗಿ ತಾಲೂಕಿನ ಕರುನಳ್ಳಿಯ ಶಂಕ್ರಪ್ಪ 2017ರಲ್ಲಿ ದೈಹಿಕ ಶಿಕ್ಷಕನಾಗಿ ನೇಮಕವಾಗಿದ್ದ. ಈತ ಹಲವು ಅವ್ಯವಹಾರಗಳನ್ನು ಆರ್.ಡಿ.ಪಾಟೀಲ್ ಜತೆ ಸೇರಿಕೊಂಡು ನಿಭಾಯಿಸಿದ್ದ. ಮುಂದೆ ತಾನೇ ಸ್ವತಃ 30 ಲಕ್ಷ ರೂಪಾಯಿಗಳಿಗೆ ಅಭ್ಯರ್ಥಿಗಳನ್ನು ಗುರುತಿಸಿಕೊಂಡು ಉತ್ತರಗಳನ್ನು ಹೇಳುವ ಮೂಲಕ ನೆರವಾಗುತ್ತಿದ್ದ. ಸಿಐಡಿ ಅಧಿಕಾರಿಗಳು ಹುಡುಕುತ್ತಿರುವ ಕುರಿತು ಸುಳಿವು ಅರಿತ್ತಿದ್ದ ಶಂಕ್ರಪ್ಪ ಹಲವು ತಿಂಗಳಿಂದ ಶಾಲೆಗೆ ಗೈರಾಗಿದ್ದ. ಆದರೆ, ಈಚೆಗೆ ಕರದಾಳ ಗ್ರಾಮದಲ್ಲಿ ಇರುವ ಕುರಿತು ಮಾಹಿತಿ ಪಡೆದ ಸಿಐಡಿ ಅಧಿಕಾರಿಗಳು ದಾಳಿ ಮಾಡಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.