Publish Date: Sat, 12 Jan 2019 (18:02 IST)
Updated Date: Sat, 12 Jan 2019 (18:03 IST)
ಮಹಾನಗರ ಪಾಲಿಕೆಯ ನೂತನ ಕಟ್ಟಡಕ್ಕೆ ರಾತ್ರೋರಾತ್ರಿ ಉರ್ದು ನಾಮ ಫಲಕ ಹಾಕಿರುವುದನ್ನು ವಿರೋಧಿಸಿ ಪಾಲಿಕೆಯ ಪ್ರತಿಪಕ್ಷದ ಸದಸ್ಯರು ಹಾಗೂ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಪ್ರತ್ಯೇಕವಾಗಿ ಪ್ರತಿಭಟನೆ ಕೈಗೊಂಡು ತಕ್ಷಣವೇ ಇಲ್ಲಿನ ಉರ್ದು ನಾಮಫಲಕವನ್ನು ತೆಗೆದು ಹಾಕುವಂತೆ ಒತ್ತಾಯಿಸಿದರು.
ಕಲಬುರಗಿ ಮಹಾನಗರ ಪಾಲಿಕೆಯ 1978ರ ನಿಯಮ 78ರ ಪ್ರಕಾರ ಪಾಲಿಕೆಯ ಕಚೇರಿಗಳಲ್ಲಿ ಉರ್ದು ಭಾಷೆಯ ನಾಮಫಲಕಗಳನ್ನು ಹಾಕುವಂತಿಲ್ಲ ಆದರೆ ಕೆಲ ಕಿಡಿಗೇಡಿಗಳು ರಾತ್ರೋರಾತ್ರಿ ಇಲ್ಲಿನ ಪಾಲಿಕೆಯ ನೂತನ ಕಾರ್ಯಾಲಯದ ಕಟ್ಟಡದಲ್ಲಿ ಉರ್ದು ಭಾಷೆಯ ನಾಮಫಲಕ ಹಾಕಿರುವುದು ಪಾಲಿಕೆ ಪ್ರತಿಪಕ್ಷದ ಬಿಜೆಪಿ ಸದಸ್ಯರ ಮತ್ತು ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.
ಪಾಲಿಕೆಯ ಎದುರು ಪ್ರತ್ಯೇಕವಾಗಿ ಪ್ರತಿಭಟನೆಯಲ್ಲಿ ತೊಡಗಿದ್ದ ಪಾಲಿಕೆ ಪ್ರತಿಪಕ್ಷದ ನಾಯಕ ವಿಠಲ ಜಾಧವ, ಸದಸ್ಯರಾದ ಆರ್.ಎಸ್.ಪಾಟೀಲ, ವಿಶಾಲ ದರ್ಗಿ, ಶಿವಾನಂದ ಪಾಟೀಲ ಅಷ್ಟಗಿ, ಶಿವುಸ್ವಾಮಿ ಮಠಪತಿ, ವೀರಣ್ಣ ಹೊನ್ನಳ್ಳಿ ಹಾಗೂ ಹೈದ್ರಾಬಾದ ಕರ್ನಾಟಕ ಕನ್ನಡ ಪರ ಸಂಘಟನೆಗಳ ಮುಖಂಡರಾದ ರವಿ ದೇಗಾಂವ, ನಂದಕುಮಾರ ನಾಗಬೂಜಂಗೆ, ಅಮೃತ ಸಿ.ಪಾಟೀಲ ಸಿರನೂರ, ಸಂದೀಪ ಭರಣಿ, ಗೊಪಾಲ ನಾಟಿಕರ, ಸಿದ್ದು ಕಂದಗಲ, ಮನೋಹರ ಬಿರನಳ್ಳಿ ಸೇರಿದಂತೆ ಹಲವರನ್ನು ಪೊಲೀಸರು ಮುಂಜಾಗ್ರತ ಕ್ರಮವಾಗಿ ತಮ್ಮ ವಶಕ್ಕೆ ಪಡೆದು ನಂತರ ಬಿಡುಗಡೆಗೊಳಿಸಿದರು.