Publish Date: Mon, 17 Jul 2023 (07:06 IST)
Updated Date: Mon, 17 Jul 2023 (10:08 IST)
ಬೆಂಗಳೂರು : ಯುಪಿಎ ಮೈತ್ರಿಕೂಟದ ಸಭೆ ಇದೇ ಜುಲೈ 17 ಹಾಗೂ 18 ರಂದು ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆಯಲಿದೆ. ಕೇಂದ್ರ ಬಿಜೆಪಿ ಸರ್ಕಾರದ ಎನ್ಡಿಎ ಮೈತ್ರಿ ಕೂಟದ ವಿರುದ್ಧ ಒಟ್ಟಾಗಿರುವ ಯುಪಿಎ ಮೈತ್ರಿಕೂಟದ ಮಹತ್ವದ ಸಭೆ ಇದಾಗಿದ್ದು, ಎರಡನೇ ಸಭೆಗೆ ಬೆಂಗಳೂರು ಸಾಕ್ಷಿಯಾಗಲಿದೆ.
ಬಿಜೆಪಿ ವಿರೋಧಿ ಪಕ್ಷಗಳೆಲ್ಲಾ ಒಗ್ಗೂಡುತ್ತಿವೆ. ಲೋಕಸಮರದಲ್ಲಿ ಮೋದಿ ಸರ್ಕಾರವನ್ನು ಮಣಿಸುವ ಉದ್ದೇಶದಿಂದ ವಿಪಕ್ಷಗಳು ಸೋಮವಾರ ಮತ್ತು ಮಂಗಳವಾರ ಬೆಂಗಳೂರಿನಲ್ಲಿ ಮಹಾಮೈತ್ರಿ ಸಭೆಯನ್ನು ನಡೆಸಲಿವೆ. ಕಾಂಗ್ರೆಸ್ ನೇತೃತ್ವದ ಈ ಸಭೆಗೆ 24 ರಾಜಕೀಯ ಪಕ್ಷಗಳಿಗೆ ಆಹ್ವಾನ ಹೋಗಿದೆ.
ಎಎಪಿಯನ್ನು ಈ ಕೂಟದ ಭಾಗವಾಗಿ ಮಾಡಿಕೊಳ್ಳಬೇಕು ಎನ್ನುವ ಉದ್ದೇಶದಿಂದ, ದೆಹಲಿ ಆಡಳಿತ ಸೇವೆಗಳಿಗೆ ಸಂಬಂಧಿಸಿದ ಸುಗ್ರಿವಾಜ್ಞೆಯನ್ನು ವಿರೋಧಿಸಲು ಕಾಂಗ್ರೆಸ್ ತೀರ್ಮಾನಿಸಿದೆ. ಹೀಗಾಗಿ ಈ ಸಭೆಯಲ್ಲಿ ಎಎಪಿಯ ಕೇಜ್ರಿವಾಲ್ ಪಾಲ್ಗೊಳ್ಳುವುದು ಬಹುತೇಕ ನಿಶ್ಚಿತವಾಗಿದೆ.
ಈಗಾಗಲೇ ಹಲವು ಪಕ್ಷಗಳ ಪ್ರಮುಖ ನಾಯಕರು ಒಬ್ಬೊಬ್ಬರಾಗಿಯೇ ಬೆಂಗಳೂರು ಕಡೆ ಮುಖ ಮಾಡಿದ್ದಾರೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ನಿತೀಶ್ ಕುಮಾರ್, ಎಂಕೆ ಸ್ಟಾಲಿನ್, ಶರದ್ ಪವಾರ್, ಲಾಲೂ ಪ್ರಸಾದ್ ಯಾದವ್, ಮಮತಾ ಬ್ಯಾನರ್ಜಿ, ಹೇಮಂತ್ ಸೋರೆನ್, ಅಖಿಲೇಶ್ ಯಾದವ್, ಉದ್ಧವ್ ಠಾಕ್ರೆ ಸೇರಿ ಪ್ರಮುಖರು ಇಂದು ಬೆಂಗಳೂರಿಗೆ ಧಾವಿಸಲಿದ್ದಾರೆ.