Publish Date: Mon, 23 Aug 2021 (19:59 IST)
Updated Date: Mon, 23 Aug 2021 (20:03 IST)
ಅಪಘಾನಿಸ್ತಾನದಿಂದ ಮತ್ತೊಬ್ಬ ಮಂಗಳೂರಿಗರೊಬ್ರು ತವರಿಗೆ ಮರಳಿದ್ದಾರೆ. ಅಫ್ಘಾನಿಸ್ಥಾನದ ಕಾಬೂಲ್ ನಲ್ಲಿ ಅಮೆರಿಕ ಪಡೆಯ ಅಧೀನದ ಸಂಸ್ಥೆಯೊಂದರಲ್ಲಿ ಅಕೌಂಟೆಂಟ್ ಆಗಿದ್ದ
ಮಂಗಳೂರಿನ ಉಳ್ಳಾಲ ಕಣೀರು ತೋಟ ನಿವಾಸಿ ಪ್ರಸಾದ್ ಆನಂದ್ ಎಂಬುವವರು ಸುರಕ್ಷಿತವಾಗಿ ಇಂದು ಮನೆಗೆ ಮರಳಿದ್ದಾರೆ.
ಪ್ರಸಾದ್ ರನ್ನ ಕಾಬೂಲ್ ನಿಂದ ನ್ಯಾಟೊ ಪಡೆ ಕತಾರ್ ಗೆ ಏರ್ ಲಿಫ್ಟ್ ಮಾಡಿತ್ತು. ಮೂರು ದಿನಗಳ ಕಾಲ ಕತಾರ್ ನಲ್ಲಿ ಉಳಿದಿದ್ದ ಪ್ರಸಾದ್ ಅಲ್ಲಿಂದ ರವಿವಾರ ರಾತ್ರಿ ದಿಲ್ಲಿಗೆ ತಲುಪಿ ಇಂದು ಬೆಳಗ್ಗೆ ಮಂಗಳೂರಿಗೆ ಆಗಮಿಸಿದ್ದು, ಮನೆ ಸೇರಿದ್ದಾರೆ.
ಪ್ರಸಾದ್ 2013ರಲ್ಲಿ ಅಕೌಂಟೆಂಟ್ ಆಗಿ ಕಾಬೂಲಿನ ಮಿಲಿಟರಿ ಬೇಸ್ ನಲ್ಲಿ ಕೆಲಸಕ್ಕೆ ಸೇರಿದ್ದರು. ತಣೀರು ತೋಟ ನಿವಾಸಿ ದಿವಂಗತ ಆನಂದ ಅಮೀನ್ ಮತ್ತು ಸರೋಜಿನಿ ದಂಪತಿಯ ಆರು ಮಕ್ಕಳಲ್ಲಿ ಪ್ರಸಾದ್ ಐದನೇಯವರು. ವಿವಾಹಿತರಾಗಿರುವ ಪ್ರಸಾದ್ ರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಪ್ರಸಾದ್ ಅವರು ಪತ್ನಿ ಭವಿಳಾ ಪ್ರಸಾದ್ ಮತ್ತು ತಮ್ಮ ಮುರಳೀರಾಜ್ ಕುಟುಂಬದ ಜೊತೆ ಕಣೀರು ತೋಟದಲ್ಲಿ ವಾಸಿಸುತ್ತಿದ್ದಾರೆ.