Publish Date: Wed, 18 Jan 2023 (16:40 IST)
Updated Date: Wed, 18 Jan 2023 (16:45 IST)
ಫುಟ್ ಪಾತ್ ಗಳಲ್ಲಿ, ಖಾಲಿ ಜಾಗ ಸಿಕ್ಕಲ್ಲಿ ಬೆಂಗಳೂರಲ್ಲಿ ಕಸ ಎಸೆಯುವುದು ಸಾಮಾನ್ಯವಾಗಿದೆ. ಬಹುತೇಕ ಕಡೆಗಳಲ್ಲಿ ಈ ಸಮಸ್ಯೆಯಿದೆ. ಇಲ್ಲಿರುವ ಫೋಟೋಗಳು ದ್ವಾರಕಾನಗರ, ಹೊಸಕೆರೆಹಳ್ಳಿ, ಬನಶಂಕರಿ ಮೂರನೇ ಹಂತದ್ದು. ಇಲ್ಲಿ ಕಳೆದ ಒಂದು ತಿಂಗಳಿನಿಂದ ಫ್ಲೈ ಓವರ್ ಕಾಮಗಾರಿ ನಡೆಯುತ್ತಿದೆ. ಅದರ ಕಸವನ್ನು ಅಲ್ಲೇ ಫುಟ್ ಪಾತ್ ಮೇಲೆ ಎಸೆಯಲಾಗಿದೆ.
ಇದರ ಜೊತೆಗೇ ಸಾರ್ವಜನಿಕರೂ ಇದೇ ಸ್ಥಳದಲ್ಲಿ ಕಸ ತಂದು ಸುರಿಯುತ್ತಿದ್ದಾರೆ. ಹೇಳಿ, ಕೇಳಿ ಇದು ಔಟರ್ ರಿಂಗ್ ರೋಡ್. ಸದಾ ವಾಹನಗಳಿಂದ ಗಿಜಿಗುಡುವ ರಸ್ತೆ. ಇಲ್ಲೇ ಪಕ್ಕದಲ್ಲಿ ಪ್ರತಿಷ್ಠಿತ ಪಿಇಎಸ್ ಇಂಜಿನಿಯರಿಂಗ್ ಕಾಲೇಜು ಇದೆ. ಕಾಲೇಜಿಗೆ ನಿತ್ಯ ಓಡಾಡುವ ವಿದ್ಯಾರ್ಥಿಗಳು, ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರು ಈ ಕಸದ ರಾಶಿಯನ್ನು ದಾಟಿ ಮುಂದೆ ಸಾಗಬೇಕು. ಸದಾ ವಾಹನಗಳು ಓಡಾಡುವ ಕಾರಣ ವಾಹನ ಸಂಚಾರ ದಟ್ಟಣೆ ಕಡಿಮೆಯಾಗಲು ಕಾದು ಜೀವ ಕೈಯಲ್ಲಿ ಹಿಡಿದುಕೊಂಡೇ ರಸ್ತೆಗಿಳಿದು ಮುಂದೆ ಹೋಗಬೇಕು. ಇದು ಅಪಾಯಕಾರಿಯಾಗಿದ್ದು, ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳು ಇದನ್ನು ತೆರವುಗೊಳಿಸಲು ಸಾರ್ವಜನಿಕರು ಫುಟ್ ಪಾತ್ ಮೇಲೆ ಸುರಕ್ಷಿತವಾಗಿ ಓಡಾಡಲು ಅನುಕೂಲ ಮಾಡಿಕೊಡಬೇಕು. ಇಲ್ಲದೇ ಹೋದರೆ ಅನಾಹುತ ತಪ್ಪಿದ್ದಲ್ಲ.