Publish Date: Tue, 12 Sep 2017 (16:52 IST)
Updated Date: Tue, 12 Sep 2017 (16:56 IST)
ಬೆಂಗಳೂರು: ಬಿಬಿಎಂಪಿ ಮೇಯರ್ ಚುನಾವಣೆಯಲ್ಲಿ ಜೆಡಿಎಸ್ ಜತೆ ಮೈತ್ರಿ ಮಾಡಿಕೊಳ್ಳಲು ಬಿಜೆಪಿಗೆ ಆಸಕ್ತಿ ಇಲ್ಲ ಎಂದು ಮಾಜಿ ಡಿಸಿಎಂ ಆರ್.ಅಶೋಕ್ ಹೇಳಿದ್ದಾರೆ.
ಅರಮನೆ ಮೈದಾನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಫ್ರಾಕ್ಸಿ ಮತದಾನ ಮಾಡಿರುವ ಕಾಂಗ್ರೆಸ್ ನ ಎಂಟು ಶಾಸಕರ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ಕೊಟ್ಟಿದ್ದೇವೆ. ಒಂದೆರಡು ದಿನಗಳಲ್ಲಿ ಚುನಾವಣಾ ಆಯೋಗದ ತೀರ್ಪು ಹೊರಬೀಳುವ ಸಾಧ್ಯತೆ ಇದೆ. ಹಾಗಾದಲ್ಲಿ ಕಾಂಗ್ರೆಸ್ ಶಾಸಕರ ಸದಸ್ಯತ್ವ ರದ್ದಾಗುತ್ತದೆ. ಒಟ್ಟು ಸದಸ್ಯರ ಸಂಖ್ಯೆ ಕಡಿಮೆಯಾಗಿ ಬಿಜೆಪಿಗೆ ಸಹಜವಾಗಿಯೇ ಮೇಯರ್, ಉಪಮೇಯರ್ ಸ್ಥಾನ ಸಿಗುತ್ತದೆ. ಹಿಂಬಾಗಿಲ ಮೂಲಕ ಅಧಿಕಾರ ಗ್ರಹಣ ನಮಗೆ ಬೇಕಿಲ್ಲ. ಕಾಂಗ್ರೆಸ್-ಜೆಡಿಎಸ್ ಅವಧಿಯಲ್ಲಿ ಬಿಬಿಎಂಪಿಯಲ್ಲಿ ಆಗಿರುವ ಭಾರಿ ಬ್ರಹ್ಮಾಂಡ ಭ್ರಷ್ಟಾಚಾರ ಹಗರಣಗಳನ್ನು ನಮ್ಮ ಮೇಲೆ ಎಳೆದುಕೊಳ್ಳುವುದು ಬೇಕಿಲ್ಲ. ದೇವೇಗೌಡರಾಗಲೀ, ಕುಮಾರಸ್ವಾಮಿಯವರಾಗಲೀ ನಮ್ಮನ್ನು ಸಂಪರ್ಕಿಸಿಲ್ಲ ಎಂದು ಹೇಳಿದ್ದಾರೆ.
ಗೌರಿ ಲಂಕೇಶ ಹತ್ಯೆ ವಿರೋಧಿಸಿ ಪ್ರತಿರೋಧ ಸಮಾವೇಶ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಇದೊಂದು ಕಾಂಗ್ರೆಸ್ ಸರ್ಕಾರದ ಕೃಪಾಪೋಷಿತ ಸಮಾವೇಶ. ತನಿಖೆಯ ದಿಕ್ಕು ತಪ್ಪಿಸಲು ಸಮಾವೇಶ ಮಾಡಲಾಗುತ್ತಿದೆ. ಹತ್ಯೆ ಪ್ರಕರಣ ಮರೆಮಾಚಲು ಸಮಾವೇಶ ಮಾಡಲಾಗುತ್ತಿದೆ. ಪ್ರಕರಣದ ಗಮನ ಬೇರೆಡೆ ಸೆಳೆಯಲು ಸಮಾವೇಶ ಮಾಡಲಾಗುತ್ತಿದೆ. ಇದು ನೂರಕ್ಕೆ ನೂರರಷ್ಟು ಇದು ಸಿಎಂ ಸಿದ್ದರಾಮಯ್ಯ ಕೃಪಾಪೋಷಿತ ಸಮಾವೇಶ ಎಂದು ಪ್ರತಿರೋಧ ಸಮಾವೇಶ ವಿರುದ್ಧ ಆರ್.ಅಶೋಕ್ ಕಿಡಿ ಕಾಡಿದ್ದಾರೆ.
ಪ್ರಕರಣ ನಡೆದು ಇಷ್ಟು ದಿನ ಕಳೆದರೂ ಆರೋಪಿಗಳ ಬಂಧನವಾಗ್ತಿಲ್ಲ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ಇದೇ ಸಾಕ್ಷಿ ಎಂದು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಪ್ರಹ್ಲಾದ್ ಜೋಷಿ ಮಾತನಾಡಿ, ಪ್ರತಿರೋಧ ಸಮಾವೇಶ ತಥಾಕಥಿತ ಬುದ್ದಿ ಜೀವಿಗಳು ಮಾಡುತ್ತಿರೋದು. ಮೊದಲಿಗೆ ರಾಹುಲ್ ಗಾಂಧಿ ಹಾಗೂ ರಾಮಚಂದ್ರ ಗುಹಾ ಅವರನ್ನು ಮೊದಲು ಎಸ್ಐಟಿ ತನಿಖೆಗೆ ಒಳಪಡಿಸಲಿ. ಅಪರಾಧಿಗಳ ಸುಳಿವು ಕೊಟ್ಟವರಿಗೆ ಇಡಲಾಗಿರುವ ಹತ್ತು ಲಕ್ಷ ರೂ. ಬಹುಮಾನವನ್ನು ರಾಹುಲ್ ಗಾಂಧಿ, ರಾಮಚಂದ್ರ ಗುಹಾ ಅವರಿಗೆ ಕೊಡಲಿ. ಅವರು ತಲಾ ಐದು ಲಕ್ಷ ರೂ ಹಂಚಿಕೊಳ್ಳಲಿ ಎಂದು ವ್ಯಂಗ್ಯವಾಡಿದ್ದಾರೆ.
ಸಿ.ಟಿ.ರವಿ ಮಾತನಾಡಿ, ಗೌರಿ ಲಂಕೇಶ್ ಹತ್ಯೆ ವಿಚಾರದಲ್ಲಿ ಇವತ್ತು ಆರ್ ಎಸ್ಎಸ್, ಬಿಜೆಪಿ ಮೇಲೆ ಆರೋಪ ಮಾಡುತ್ತಿರುವವರು ಸತ್ಯ ಹೊರ ಬಂದಾಗ ಬುರ್ಖಾ ಹಾಕಿಕೊಂಡು ಓಡಾಡಬೇಕಾಗುತ್ತದೆ. ಇದು ಪ್ರತಿರೋಧ ಸಮಾವೇಶ ಅಲ್ಲ. ಬಿಜೆಪಿ, ಆರ್ ಎಸ್ಎಸ್ ವಿರೋಧಿ ಸಮಾವೇಶ ಎಂಬಂತಾಗಿದೆ. ಆರ್ ಎಸ್ಎಸ್ ನ್ನು ವಿರೋಧಿಸುವುದು ರಾಹುಲ್ ಗಾಂಧಿಯವರ ತಾತ ನೆಹರು ಅವರಿಂದ ಬಂದ ಬಳುವಳಿ ಎಂದು ಹೇಳಿದ್ದಾರೆ.