Select Your Language

Notifications

webdunia
webdunia
webdunia
webdunia

ನೈಟ್-ವೀಕೆಂಡ್ ಕರ್ಫ್ಯೂ: ಲೈಟೆ ಇಲ್ಲದ ಕಂಬಗಳಾಗಿರುವ ಸರಕಾರದ ರೂಲ್ಸುಗಳು

ನೈಟ್-ವೀಕೆಂಡ್ ಕರ್ಫ್ಯೂ: ಲೈಟೆ ಇಲ್ಲದ ಕಂಬಗಳಾಗಿರುವ ಸರಕಾರದ ರೂಲ್ಸುಗಳು
bangalore , ಭಾನುವಾರ, 16 ಜನವರಿ 2022 (20:36 IST)
ಮಾರಣಾಂತಿಕ ಕೊರೊನಾ ಕಳೆದ ಎರಡು ವರ್ಷಗಳಿಂದ ಇಡೀ ಮನುಕುಲವನ್ನು ಕಾಡುತ್ತಿದೆ ನಿಜ. ಆದರೆ, ಸಾಮಾನ್ಯ ಜನ ಮಾತ್ರ ಕೊರೊನಾ ಸೋಂಕಿಗೆ ಕಂಗೆಟ್ಟಿದ್ದಕ್ಕಿಂತ ಸರ್ಕಾರದ ಲಾಕ್ಡೌನ್ ಅಸ್ತ್ರಕ್ಕೆ ಬೆದರಿದ್ದೇ ಹೆಚ್ಚು. ಒಕ್ಕೂಟ ಸರ್ಕಾರದ ಲಾಕ್ಡೌನ್ ಅಕ್ಷರಶಃ ಬಡಜನ ವಲಸೆ ಕಾರ್ಮಿಕ ಮತ್ತು ದಿನಗೂಲಿ ನೌಕರರನ್ನು ಹಿಂಡಿಹಿಪ್ಪೆ ಮಾಡಿದ್ದು, ಜನ ತಮ್ಮ ಮನೆಗಾಗಿ ಸಾವಿರಾರು ಕಿಲೋ ಮೀಟರ್ ಕ್ರಮಿಸಿ ದಾರಿ ನಡುವೆ ಜೀವ ಬಿಟ್ಟಿದ್ದನ್ನು ಭಾಗಶಃ ದೇಶ ಇನ್ನೂ ಮರೆತಿಲ್ಲ.
ಇಷ್ಟಾಗಿಯೂ, ದೇಶದ ಒಳಿತಿಗಾಗಿ ಎಂಬ ಹಣೆಪಟ್ಟಿಯ ಅಡಿಯಲ್ಲಿ ಬಡಜನ ಲಾಕ್ಡೌನ್ ಅನ್ನು ಸಹಿಸಿಕೊಂಡಿದ್ದರು. ಹೀಗಿದ್ದೂ ಕೊರೊನಾ ಏನು ಕಡಿಮೆಯಾಗಿರಲಿಲ್ಲ. ಪರಿಣಾಮ ಜನ ಕೊರೊನಾ ಜೊತೆಗೆ ಬದುಕುವುದನ್ನು ಕಲಿಯಬೇಕು ಎಂಬ ಕಿವಿಮಾತು ಒಕ್ಕೂಟ ಸರ್ಕಾರದಿಂದಲೇ ಕೇಳಿ ಬಂದಿತ್ತು. ಜನರೂ ಅದಕ್ಕೆ ಒಗ್ಗಿಕೊಂಡಿದ್ದರು.
ಇದಾಗಿಯೂ, ಈಗ ಇದೇನಿದು ಮತ್ತೆ ತಲೆಬುಡವಿಲ್ಲದ ವೀಕೆಂಡ್ ಕರ್ಫ್ಯೂ? ಇದರಿಂದ ನಿಜಕ್ಕೂ ಕೊರೊನಾವನ್ನು ಓಡಿಸೋಕೆ ಸಾಧ್ಯಾವೇ? ಅಥವಾ ಇದು ಕೇವಲ ಸರ್ಕಾರದ ಬೂಟಾಟಿಕೆಯಾ? ಇವರ ಬೂಟಾಟಿಕೆಗಾಗಿ ದಿನಗೂಲಿ ಮತ್ತು ಬಡಜನರ ಹೊಟ್ಟೆ ಮೇಲೆ ಏಕೆ ಎಂಬ ಪ್ರಶ್ನೆ ಇದೀಗ ಜನಮಾನಸದಲ್ಲಿ ಮೂಡಿದೆ.
 
ತಲೆಬುಡವಿಲ್ಲದ ರೂಲ್ಸುಗಳು.
 
ಭಾರತದಲ್ಲಿ ಕೊರೊನಾ ವಿಪರೀತ ಹಂತಕ್ಕೆ ತಲುಪಿದ್ದ ಸಂದರ್ಭದಲ್ಲಿ ಲಕ್ಷಾಂತರ ಜನ ಈ ಸೋಂಕಿಗೆ ಒಳಗಾಗಿ ಸಾಕಷ್ಟು ನೋವುಗಳನ್ನು ಅನುಭವಿಸಿದ್ದರೆ, ಅಸಂಖ್ಯಾತ ಜನ ಮೃತಪಟ್ಟಿದ್ದಾರೆ. ಕೊರೊನಾ ಸೋಂಕಿನಿಂದ ಮೃತಪಟ್ಟವರಿಗೆ ಕನಿಷ್ಟ ಒಂದು ಗೌರವಾನ್ವಿತ ಅಂತ್ಯ ಸಂಸ್ಕಾರವೂ ಸಿಗದೆ ಹೋದದ್ದನ್ನು ಸ್ಮಶಾನಗಳ ಎದುರು ಶವಗಳು ಸಾಲುಗಟ್ಟಿನಿಂತ, ಗಂಗೆಯಲ್ಲಿ ಹೆಣಗಳನ್ನು ಬಿಸಾಡಿ ಹೋದ ಹತ್ತಾರು ಅಮಾನವೀಯ ಘಟನೆಗಳಿಗೆ ಭಾರತ ಸಾಕ್ಷಿಯಾಗಿತ್ತು.
ಪರಿಣಾಮ 2021 ರಲ್ಲಿ ದೇಶದಾದ್ಯಂತ ಸಾಲು ಸಾಲು ಲಾಕ್ಡೌನ್ ಹೇರಲಾಗಿತ್ತು. ಹತ್ತಾರು ಕಷ್ಟದ ನಿಯಮಗಳನ್ನು ರೂಪಿಸಲಾಗಿತ್ತು. ಆದರೂ, ಸಹ ಯಾವ ಪ್ರಯತ್ನವೂ ಫಲ ನೀಡಿರಲಿಲ್ಲ. ಕನಿಷ್ಟ 4.85 ಲಕ್ಷ ಜನ ಈ ಸೋಂಕಿಗೆ ಬಲಿಯಾಗಿದ್ದರು. ಸಾವುಗಳು ಹೆಚ್ಚುತ್ತಿದ್ದ ಅದೇ ಸಂದರ್ಭದಲ್ಲೇ ಮತ್ತೊಂದೆಡೆ ಜನರಲ್ಲಿ ಸಾಮೂಹಿಕ ರೋಗ ನಿರೋಧಕ ಶಕ್ತಿಯೂ ವೃದ್ಧಿಸಿತ್ತು ಎನ್ನುತ್ತಿವೆ ಹಲವು ಅಧ್ಯಯನಗಳು.
ಇದಕ್ಕೆ ಪೂರಕವಾಗಿ ಕೊರೊನಾ ಬೆನ್ನಿಗೆ ದಾಳಿಯಿಟ್ಟ ಡೆಲ್ಟಾ ಪ್ಲಸ್, ಬ್ಯ್ಲಾಕ್ ಫಂಗಸ್ ಸಹ ಅಷ್ಟೇನೂ ದೊಡ್ಡ ಅಪಾಯವನ್ನು ತಂದಿಟ್ಟಿರಲಿಲ್ಲ. ಪರಿಣಾಮ ಜನ ಸಾಮಾನ್ಯವಾಗಿಯೇ ಈ ವೈರಸ್‌ಗೆ ಹೆದರುವುದನ್ನು ಬಿಟ್ಟಿದ್ದರು. ಸರ್ಕಾರವೂ ಸಹ ಲಾಕ್ಡೌನ್ ಅನ್ನು ಸಿಡಿಲಿಸಿ ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂವನ್ನು ಹೇರಿತ್ತು. ಈ ನಿಯಮಗಳು ಅಷ್ಟೇನು ಪರಿಣಾಮಕಾರಿ ಅಲ್ಲ ಎಂಬ ವಿವಾದದಿಂದಾಗಿಯೇ ಕೊನೆಗೆ ಅದನ್ನೂ ಕೈಬಿಡಲಾಗಿತ್ತು. ಆದರೆ, ಸರ್ಕಾರ ಈಗ ಮತ್ತೆ ಅದೇ ವೀಕೆಂಡ್ ಕರ್ಫ್ಯೂವನ್ನು ಹೇರಿದೆ. ಈ ಮೂಲಕ ಕೊರೊನಾವನ್ನು ನಿಯಂತ್ರಿಸಬಹುದು ಎನ್ನುತ್ತಿದೆ. ಹಾಗಾದರೆ ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಮೂಲಕ ಕೊರೊನಾ ನಿಯಂತ್ರಣ ಸಾಧ್ಯವೇ? ಏನನ್ನುತ್ತಿವೆ ಅಂಕಿಅಂಶಗಳು.
 
ವೀಕೆಂಡ್ ಕರ್ಫ್ಯೂ ಪರಿಣಾಮಕಾರಿಯೇ..?
 
ಕರ್ನಾಟಕದಲ್ಲಿ ಈವರೆಗೆ ಒಟ್ಟು 16,46,193 ಕೊರೊನಾ ಕೇಸ್‌ಗಳು ದಾಖಲಾಗಿವೆ. ಈ ಪೈಕಿ ಸಕ್ರೀಯ ಪ್ರಕರಣಗಳು ಕೇವಲ 2334. 4,12,266 ಜನ ಸೋಂಕಿನಿಂದ ಚೇತರಿಸಿಕೊಳ್ಳುತ್ತಿದ್ದರೆ, ಮೃತಪಟ್ಟವರ ಸಂಖ್ಯೆ ಕೇವಲ 8 ಮಾತ್ರ. ಇನ್ನೂ ವೀಕೆಂಡ್ ಕರ್ಫ್ಯೂ ಹೆಸರಿನಲ್ಲಿ ಜನವರಿ 1 ಮತ್ತು 2 ರಂದು ಇಡೀ ಬೆಂಗಳೂರು ಮಹಾನಗರವನ್ನು ಬಂದ್ ಮಾಡಲಾಗಿತ್ತು. ಆದರೆ, ಈ ವೇಳೆ ಸೋಂಕು ಹರಡುವ ಪ್ರಮಾಣ ಇತರೆ ದಿನಕ್ಕಿಂತ ಶೇ. 5ರಿಂದ 6ರಷ್ಟು ಮಾತ್ರ ಕಡಿಮೆಯಾಗಿದೆಯೇ ಹೊರತು ಹೆಚ್ಚು ಲಾಭವೇನಿಲ್ಲ.
ಆದರೆ, ವಾರಾಂತ್ಯದ ಹೊರತಾಗಿ ಉಳಿದ ದಿನಗಳಲ್ಲಿ ಜನ ಸಾಮಾನ್ಯರ ಓಡಾಟಕ್ಕೆ ಎಂದಿನಂತೆ ಅವಕಾಶ ನೀಡಲಾಗಿದೆ. ಆದರೆ, ಈ ದಿನಗಳಲ್ಲಿ ಜನರಿಗೆ ಸೋಂಕು ಹರಡುವುದಿಲ್ಲವೇ? ಕೇವಲ ವಾರಾಂತ್ಯಗಳಲ್ಲಿ ಮಾತ್ರ ಸೋಂಕು ಹರಡುತ್ತದೆಯೇ? ಎಂದು ಜನ ಸಾಮಾನ್ಯರು ತಲೆಬುಡವಿಲ್ಲದ ಸರ್ಕಾರದ ಈ ನಿಯಮಗಳ ವಿರುದ್ಧ ಕೆಂಡಾಮಂಡಲರಾಗಿದ್ದಾರೆ. ಅದಕ್ಕೂ ಕಾರಣಗಳು ಇಲ್ಲದೆ ಏನಿಲ್ಲ.
 
ಸರ್ಕಾರದ ವಿರುದ್ಧ ಜನಾಕ್ರೋಶ:
 
2021ರಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿ ಲಾಕ್ಡೌನ್ ಘೋಷಿಸಿದ್ದಾಗ ಅತಿ ಹೆಚ್ಚು ಸಂಕಷ್ಟಕ್ಕೆ ಒಳಗಾದವರು ದಿನಗೂಲಿ ಮತ್ತು ವಲಸೆ ಕಾರ್ಮಿಕರು. ಈ ವೇಳೆ ಜನ ಕೆಲಸ ಇಲ್ಲದೆ, ಕೂಲಿಯೂ ಇಲ್ಲದೆ ಹಸಿವಿನಿಂದ ಸಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ವಿರೋಧ ಪಕ್ಷಗಳ ಸತತ ವಾಗ್ದಾಳಿಯ ನಂತರ ಕೇಂದ್ರ ಸರ್ಕಾರ 20 ಲಕ್ಷ ರೂ. ಪ್ಯಾಕೇಜ್ ಘೋಷಣೆ ಮಾಡಿತ್ತಾದರೂ ಲಕ್ಷಾಂತರ ಫಲಾನುಭವಿಗಳಿಗೆ ಇನ್ನೂ ಆ ಹಣ ಸಿಕ್ಕೇ ಇಲ್ಲ. ಆಗ ಅನುಭವಿಸಿದ್ದ ಕಷ್ಟಗಳಿಂದಲೇ ಬಡ ಜನ ಇನ್ನೂ ಚೇತರಿಸಿಕೊಂಡಿಲ್ಲ. ಅಷ್ಟರಲ್ಲೇ ಮತ್ತೊಂದು ವೀಕೆಂಡ್ ಕರ್ಫ್ಯೂ ಜಾರಿಯಾಗಿದೆ.
ಈ ವೀಕೆಂಡ್ ಕರ್ಫ್ಯೂನಿಂದ ದಿನಗೂಲಿ ನೌಕರರು, ಕಾರ್ಮಿಕರು ಅದರಲ್ಲೂ ಮುಖ್ಯವಾಗಿ ಆಟೋ ಮತ್ತು ಕ್ಯಾಬ್ ಚಾಲಕರು ಸಾಕಷ್ಟು ತೊಂದರೆಗೆ ಈಡಾಗುತ್ತಾರೆ. ದಿನದ ದುಡಿಮೆ ಇಲ್ಲದೆ ಸಂಕಷ್ಟಕ್ಕೆ ಒಳಗಾಗುತ್ತಾರೆ. ಆದರೆ, ಇದ್ಯಾವುದರ ಬಗ್ಗೆಯೂ ಪರಿವೆಯೇ ಇಲ್ಲದ ಸರ್ಕಾರ ಬಡ ಜನರಿಗೆ ಕನಿಷ್ಟ ಪರಿಹಾರ ಅಥವಾ ಪಡಿತರವೂ ನೀಡದೆ ಕರ್ಫ್ಯೂ ಹೇರಿರುವುದು ನಿಜಕ್ಕೂ ಅಮಾನವೀಯತೆಯ ಪರಮಾವಧಿ. ಇಷ್ಟಕ್ಕೂ ಪಂಚ ರಾಜ್ಯಗಳ ಚುನಾವಣೆ ಎದುರಾಗಿದ್ದು ಬಿಜೆಪಿ ಎಲ್ಲೆಡೆ ಸಾಲು ಸಾಲು ಚುನಾವಣಾ ರ್ಯಾಲಿಗಳನ್ನು ಆಯೋಜಿಸಿದೆ. ಈ ರ್‍ಯಾಲಿಗಳಲ್ಲಿ ಆವರಿಸದ ಕೊರೊನಾ ಕರ್ನಾಟಕಕ್ಕೆ ಮಾತ್ರ ಕಂಟಕವಾಗಲಿದೆ ಎಂದು ಸರ್ಕಾರ ಅಂದಾಜಿಸಿರುವುದು ದುರದೃಷ್ಟಕರ.

Share this Story:

Follow Webdunia kannada

ಮುಂದಿನ ಸುದ್ದಿ

ನೇತಾಜಿ ಸುಭಾಷ್ ಚಂದ್ರ ಬೋಸ್ ಜನ್ಮ ದಿನದಿಂದಲೇ ಗಣರಾಜ್ಯೋತ್ಸವ ಆಚರಣೆ ಆರಂಭ