ಆಕಸ್ಮಿಕವಾಗಿ ಮೀನು ನುಂಗಿದ ಯುವಕನೋರ್ವ ಉಸಿರುಗಟ್ಟಿ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ಹಾವೇರಿ ಜಿಲ್ಲೆಯ ರಾಣೆ ಬೆನ್ನೂರಿನಲ್ಲಿ ನಡೆದಿದೆ.
ತಾಲ್ಲೂಕಿನ ನೂಕಾಪುರ ತಾಂಡಾದ ನಿವಾಸಿ ಕೃಷ್ಣಪ್ಪ ಆನಪ್ಪ ಕೇತಾವತ (24)ಮೃತ ಯುವಕನಾಗಿದ್ದಾನೆ.
ಚೌಡಯ್ಯದಾನಪುರ ಬಳಿ ತುಂಗಭದ್ರಾ ನದಿಪಾತ್ರದಲ್ಲಿ ಮೀನು ಹಿಡಿಯಲು ಹೋಗಿದ್ದ ಕೃಷ್ಣಪ್ಪನಿಗೆ ಬಾಂಬೈ ಕಾಟ್ಲಾ ಜಾತಿಯ ಮೀನು ಸಿಕ್ಕಿತ್ತು. ಅದನ್ನು ಬಾಯಲ್ಲಿ ಹಿಡಿದುಕೊಂಡು ಮತ್ತೊಂದು ಮೀನು ಹಿಡಿಯಲು ಮುಂದಾದಾಗ ಜಾರಿದ ಮೀನು ಗಂಟಲ ಒಳಗೆ ಹೋಗಿ ಉಸಿರುಗಟ್ಟಿ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಕಳೆದ ಮೂರು ದಿನಗಳ ಹಿಂದಷ್ಟೇ ಆತನಿಗೆ ಮದುವೆಯಾಗಿದ್ದು, ಪತ್ನಿ ಮತ್ತು ಪರಿವಾರದವರ ಆಕ್ರಂದನ ಮುಗಿಲು ಮುಟ್ಟಿದೆ.