Publish Date: Thu, 03 Jul 2025 (12:28 IST)
Updated Date: Thu, 03 Jul 2025 (12:30 IST)
ಬೆಂಗಳೂರು: ಬೆಂಗಳೂರು ವಿಶ್ವ ವಿದ್ಯಾಲಯಕ್ಕೆ ಮಾಜಿ ಪ್ರಧಾನಿ ದಿವಂಗತ ಡಾ ಮನಮೋಹನ್ ಸಿಂಗ್ ಹೆಸರು ಇಟ್ಟಿರುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದು ಕನ್ನಡಿಗರು ಯಾರೂ ಇರ್ಲಿಲ್ವಾ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.
ಡಾ. ಮನಮೋಹನ್ ಸಿಂಗ್ ಇದೇ ವರ್ಷ ನಮ್ಮನ್ನಗಲಿದ್ದರು. ಅವರು ಅಗಲಿದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಬೆಂಗಳೂರು ವಿವಿಗೆ ಅವರ ಹೆಸರಿಡುವುದಾಗಿ ಘೋಷಣೆ ಮಾಡಿದ್ದರು. ಇದೀಗ ನಿನ್ನೆ ನಂದಿಬೆಟ್ಟದಲ್ಲಿ ನಡೆದ ವಿಶೇಷ ಸಂಪುಟ ಸಭೆಯಲ್ಲಿ ಇದನ್ನು ಕಾರ್ಯರೂಪಕ್ಕೆ ತರಲಾಗಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು ದೇಶದ ಪ್ರಧಾನಿಗಳಾಗಿ ಬೆಂಗಳೂರು ನಗರದ ಅಭಿವೃದ್ಧಿಗೆ ಸಾಕಷ್ಟು ಯೋಜನೆ ಮತ್ತು ಕೊಡುಗೆಗಳನ್ನು ನೀಡಿದ್ದ ಆರ್ಥಿಕ ತಜ್ಞ ಡಾ. ಮನಮೋಹನ್ ಸಿಂಗ್ ಅವರನ್ನು ಸ್ಮರಿಸಿ, ಗೌರವಿಸುವ ಕೆಲಸವನ್ನು ಮಾಡುವುದು ಒಂದು ಸರ್ಕಾರವಾಗಿ ಮಾತ್ರವಲ್ಲ, ಕನ್ನಡಿಗನಾಗಿಯೂ ನನ್ನ ಕರ್ತವ್ಯ ಎಂದಿದ್ದಾರೆ.
ಆದರೆ ಇದಕ್ಕೆ ನೆಟ್ಟಿಗರು ಸಾಕಷ್ಟು ಸಂಖ್ಯೆಯಲ್ಲಿ ಕಾಮೆಂಟ್ ಮಾಡಿದ್ದು, ಬೆಂಗಳೂರು ವಿವಿಗೆ ಹೆಸರಿಡಲು ಅನೇಕ ಕನ್ನಡ ಸಾಧಕರೇ ಇದ್ದರು. ಅವರ ಹೆಸರಿಡುವ ಬದಲು ಮನಮೋಹನ್ ಸಿಂಗ್ ಹೆಸರಿಟ್ಟಿರುವುದು ಯಾಕೆ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ. ಕನಿಷ್ಠ ಪಕ್ಷ ಎಸ್ಎಂ ಕೃಷ್ಣ ಹೆಸರಾದರೂ ಇಡಬಹುದಿತ್ತಲ್ವೇ ಎಂದು ತಕರಾರು ತೆಗೆದಿದ್ದಾರೆ.