Publish Date: Sun, 10 Jul 2022 (20:04 IST)
Updated Date: Sun, 10 Jul 2022 (20:07 IST)
ಶಾಂತಗೊಂಡಿದ್ದ ನೇತ್ರಾವತಿ- ಕುಮಾರಧಾರ ನದಿಗಳು ಇಂದು ಮತ್ತೆ ರೌದ್ರವತಾರ ತಾಳಿವೆ. ಭಾನುವಾರ ನಸುಕಿನ ಜಾವದಿಂದಲೇ ಎರಡೂ ನದಿಗಳಲ್ಲಿ ನೀರಿನ ಹರಿವು ಭಾರೀ ಪ್ರಮಾಣದಲ್ಲಿ ಹೆಚ್ಚಳಗೊಂಡಿದ್ದು, ಅಪಾಯದ ಮಟ್ಟ ತಲುಪಿದೆ. ಈಗಾಗಲೇ ನದಿ ಪಾತ್ರದ ಪ್ರದೇಶಗಳು ಜಲಾವೃತಗೊಂಡಿವೆ. ಉಭಯ ನದಿಗಳಲ್ಲಿ ನೀರು ಹೆಚ್ಚಳವಾಗುತ್ತಲೇ ಇದ್ದು 2019ರ ಬಳಿಕ ಮತ್ತೊಮ್ಮೆ ನೆರೆ ಬರುವ ಸಾಧ್ಯತೆ ಕಾಣಿಸಿಕೊಂಡಿದೆ. ಕಳೆದ ಕೆಲವು ದಿನಗಳಲ್ಲಿ ನೆರೆ ಭೀತಿ ಮೂಡಿಸಿದ ನೇತ್ರಾವತಿ- ಕುಮಾರಧಾರ ನದಿಗಳು ಶನಿವಾರ ಶಾಂತಗೊಂಡಿದ್ದವು. ಉಭಯ ನದಿಗಳಲ್ಲಿ ನೀರ ಹರಿವು ತೀರಾ ಕಡಿಮೆಯಾಗಿತ್ತು. ಆದರೆ ಶನಿವಾರ ಸಂಜೆಯಿಂದ ನೀರು ಏರಿಕೆಯಾಗುತ್ತಲೇ ಇದ್ದು, ಇಂದು ಅಪಾಯದ ಮಟ್ಟದಲ್ಲಿ ಉಭಯ ನದಿಗಳ ನೀರು ಹರಿಯುತ್ತಿದೆ. ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ಬಳಿ ಇರುವ 38 ಮೆಟ್ಟಿಲುಗಳಲ್ಲಿ ಒಂದು ಮೆಟ್ಟಿಲಷ್ಟೇ ಕಾಣುತ್ತಿದ್ದು, ಉಳಿದ ಮೆಟ್ಟಿಲುಗಳೆಲ್ಲಾ ಮುಳುಗಿವೆ. ಈ ಒಂದು ಮೆಟ್ಟಿಲು ಮುಳುಗಿದರೆ ನೀರು ದೇವಾಲಯದ ವಠಾರಕ್ಕೆ ಪ್ರವೇಶಿಸಲಿದೆ.