Publish Date: Fri, 19 Apr 2024 (14:34 IST)
Updated Date: Fri, 19 Apr 2024 (14:38 IST)
ಹುಬ್ಬಳ್ಳಿ: ತನ್ನ ಮಗಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿದ್ದ ಸಿಎಂ ಸಿದ್ದರಾಮಯ್ಯ ಮತ್ತು ಗೃಹಸಚಿವ ಪರಮೇಶ್ವರ್ ವಿರುದ್ಧ ಕಾಂಗ್ರೆಸ್ ಕಾರ್ಪೋರೇಟರ್, ನೇಹಾ ತಂದೆ ನಿರಂಜನ್ ಹೀರೇಮಠ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಕಾರ್ಪೋರೇಟರ್ ಆಗಿರುವ ನನ್ನ ಮಗಳಿಗೇ ಈ ಗತಿಯಾದರೆ ಜನ ಸಾಮಾನ್ಯರ ಕತೆಯೇನು ಎಂದು ಅಳಲು ತೋಡಿಕೊಂಡಿದ್ದಾರೆ. ನೇಹಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿದ್ದ ಸಿಎಂ ಸಿದ್ದರಾಮಯ್ಯ ಇದು ಲವ್ ಜಿಹಾದ್ ಅಲ್ಲ, ವೈಯಕ್ತಿಕ ಕಾರಣಕ್ಕೆ ನಡೆದ ಕೊಲೆ ಪ್ರಕರಣವಷ್ಟೇ ಎಂದು ತಿಪ್ಪೆ ಸಾರಿದ್ದರು.
ಇನ್ನೊಂದೆಡೆ ಆರೋಪಿ ಫಯಾಜ್ ಮತ್ತು ನೇಹಾ ಪ್ರೀತಿಸುತ್ತಿದ್ದರು ಗೃಹಸಚಿವ ಪರಮೇಶ್ವರ್ ಹೇಳಿಕೆ ನೀಡಿದ್ದರು. ಇದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ನೇಹಾ ತಂದೆ ನಿರಂಜನ್, ಇಂತಹ ಹೇಳಿಕೆ ನೀಡಲು ಹೇಗೆ ಮನಸ್ಸು ಬರುತ್ತದೆ? ನನ್ನ ಮನೆತನದ ಗೌರವ ಹಾಳು ಮಾಡಬೇಡಿ. ವೈಯಕ್ತಿಕ ಕಾರಣ ಎಂದರೆ ಏನು ಅರ್ಥ? ನನ್ನ ಮಗಳಿಗೂ ಆತನಿಗೆ ವೈಯಕ್ತಿಕ ವ್ಯವಹಾರಗಳಿದ್ದರೆ ಆತ ಯಾಕೆ ಕೊಲೆ ಮಾಡುತ್ತಿದ್ದ? ನಮಗೂ ಅವರ ಕುಟುಂಬಕ್ಕೂ ಏನು ಸಂಬಂಧ? ತನಿಖೆ ದಿಕ್ಕು ತಪ್ಪಿಸಬೇಡಿ. ಹೀಗೆಲ್ಲಾ ಹೇಳಿ ನನ್ನ ಮನೆತನದ ಮರ್ಯಾದೆ ಹಾಳು ಮಾಡಬೇಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು, ಘಟನೆ ಕುರಿತಂತೆ ಹುಬ್ಬಳ್ಳಿಯಲ್ಲಿ ಪ್ರತಿಭೆಟನೆ ಜೋರಾಗಿದ್ದು ಸಿದ್ದರಾಮಯ್ಯ ಮತ್ತು ಗೃಹಸಚಿವರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಇಂತಹ ಬೇಜವಾಬ್ದಾರಿಯುತ ಹೇಳಿಕೆಗಳನ್ನು ನೀಡುತ್ತಿರುವ ಸಿದ್ದರಾಮಯ್ಯ ರಾಜೀನಾಮೆ ನೀಡಲಿ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.