Publish Date: Fri, 16 Jul 2021 (17:05 IST)
Updated Date: Fri, 16 Jul 2021 (22:03 IST)
ಸುಡುಬಿಸಿಲಲ್ಲೂ ಬೀಸಿ ಬರುವ ತಂಗಾಳಿ. ಮಂಜಿನ ಜೊತೆಗೆ ತುಂತುರು ಮಳೆ, ದೇಗುಲದಿಂದ ಕೇಳಿ ಬರುವ ಗಂಟೆಯ ನಿನಾದ. ಮಂಜುಮುಸುಕಿನ ಆಹ್ಲಾದಕರ ವಾತಾವರಣ.ಹೀಗೆ ಸದಾ ಪ್ರವಾಸಿಗರಿಗೆ ಉಲ್ಲಾಸ ತುಂಬುತ್ತಾ ತನ್ನತ್ತ ಕೈಬೀಸಿ ಕರೆಯುವ ತಾಣ, ಈ ವರ್ಷದ ಎಲ್ಲಾದಿನದಲ್ಲೂ ಹಿಮದಿಂದ ಆವರಿಸಿರುವ ಬೆಟ್ಟ ,
ತುಂತುರು ಮಳೆ ,ಈ ಮಳೆಯ ನಡುವೆಯೂ ಅಲ್ಲಲ್ಲಿ ನಿಂತು ಪ್ರಕೃತಿ ಸೌಂದರ್ಯ ಸವಿಯುತ್ತಿರುವ ಪ್ರವಾಸಿಗರು.ಈ ಅದ್ಬುತ ಪ್ರಕೃತಿ ಮನೋಹರ ಸೌಂದರ್ಯ ಕ್ಷಣಗಳಿಗೆ ಸಾಕ್ಷಿಯಾಗಿದ್ದು,ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿರುವ ಹಿಮಮತ್ ಗೋಪಾಲಸ್ವಾಮಿ ಬೆಟ್ಟ.ಸಮುದ್ರಮಟ್ಟದಿಂದ ಸುಮಾರು 1454 ಮೀ. ಎತ್ತರದಲ್ಲಿರುವ ಪಶ್ಚಿಮ ಘಟ್ಟಗಳ ಸಾಲಿಗೆ ಸೇರಿದ ತನ್ನ ಅನುಪಮ ಸೌಂದರ್ಯದಿಂದ, ತನ್ನದೆ ಆದ ಪ್ರತ್ಯೇಕ ಸಾಲಿನಲ್ಲಿ ನಿಲ್ಲುವ ಕರ್ನಾಟಕದ ಅತ್ಯಂತ ಹೆಮ್ಮೆಯ ತಾಣ.
ಹಿಮವದ್ ಗೋಪಾಲಸ್ವಾಮಿ ಬೆಟ್ಟ.ಹಿಮದಿಂದ ಆವೃತ್ತವಾಗುತ್ತಾ ರವಿಕಿರಣದಲ್ಲಿ ತನ್ನ ಸ್ನಿಗ್ಧ ಸೌಂದರ್ಯ ಚಾಚಿಕೊಂಡು ವರ್ಷದ ಎಲ್ಲಾ ಕಾಲದಲ್ಲೂ ತಂಪಾದ ಹವಾಗುಣವಿರುವ ಈ ಪ್ರದೇಶದಲ್ಲಿ ಮಳೆಗಾಲ ಹಾಗೂ ಚಳಿಗಾಲದಲ್ಲಿ ಸದಾ ಮಂಜುಮುಸುಕಿದ ವಾತಾವರಣ. ಚಾರಣ ಪ್ರಿಯರಿಗೆ ಹುರುಪಿನ ತಾಣವಾಗಿಯೂ, ನಿಸರ್ಗ ಪ್ರೇಮಿಗಳಿಗೆ ಮುದ ನೀಡುವ, ಭಕ್ತರಿಗೆ ಇಷ್ಟಾರ್ಥ ನೆರವೇರಿಸುವ ಕ್ಷೇತ್ರವಾಗಿಯೂ ಗೋಪಾಲಸ್ವಾಮಿ ಗಮನಸೆಳೆಯುತ್ತಿದೆ.
ಮಂಜಿನ ಜೊತೆಗೆ ಮಳೆಯ ತುಂತುರು ಹನಿಗಳು, ದೇವಾಲಯದ ಗರ್ಭಗುಡಿಯ ಬಾಗಿಲಿನ ಮೇಲ್ಭಾಗದಿಂದ ನಿರಂತರವಾಗಿ ಜಿನುಗುವ ಹಿಮದ ನೀರು ಪ್ರವಾಸಿಗರ ಕಣ್ಣು ಕುಕ್ಕುತ್ತದೆ.ಇನ್ನು ನಿಸರ್ಗ ಸೌಂದರ್ಯವನ್ನು ಸವಿಯುತ್ತಾ ಕಾಡಿನೊಳಗೆ ಅಲೆದಾಡುವ ಪ್ರಾಣಿ, ಹಾರಾಡುವ ಪಕ್ಷಿಗಳು ಅಲ್ಲಲ್ಲಿ ಆನೆ, ಜಿಂಕೆ, ನವಿಲು ದಿಢೀರ್ ದರ್ಶನ ನೀಡಿ ಪ್ರವಾಸಿಗರಿಗೆ ರೋಮಾಂಚನಗೊಳಿಸುತ್ತದೆ. ಬೆಟ್ಟಕ್ಕೆ ಆಗಮಿಸುವ ಪ್ರವಾಸಿಗರು ಇಲ್ಲಿನ ನಿಸರ್ಗಕ್ಕೆ ಮಾರು ಹೋಗಿ ತಮ್ಮೆಲ್ಲಾ ಜಂಜಾಟಗಳನ್ನು ಪ್ರಕೃತಿಯ ಮಡಿಲಲ್ಲಿ ಮರೆತು ಕುಣಿದು ಕುಪ್ಪಳಿಸುತ್ತಾರೆ.
ಆಕಾಶವನ್ನೇ ಮುಚ್ಚಿಕೊಂಡಿರುವ ಬೆಟ್ಟಗಳು, ಬೆಟ್ಟಕ್ಕೆ ಬಣ್ಣ ಬಳಿದಂತಿರುವ ಹಚ್ಚ ಹಸಿರಿನ ಮರಗಳು.ಈ ಹಸಿರ ಕೋಟೆಯನ್ನು ಆವರಿಸಿಕೊಂಡಿರುವ ಹಿಮಗಳು.ಈ ಪ್ರಕೃತಿಯ ಸೌಂದರ್ಯದ ಮುಂದೆ ಎಲ್ಲವೂ ಶೂನ್ಯ ,ಬೇರೆಲ್ಲೂ ಸಿಗದ, ಅದ್ಬುತ ಪರಿಸರ ಸೌಂದರ್ಯ ಹೊಂದಿರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಬಂದರೆ ಹಿಮಾಲಯ ಪರ್ವತ ನೋಡಿದ ಬಾಷವಾಗುತ್ತದೆ. ಜೀವನದಲ್ಲಿ ಒಮ್ಮೆಯಾದರೂ ನೋಡಬೇಕು.ಒಂದೇ ಸುತ್ತುಪೌಳಿಯಲ್ಲಿ ನಿರ್ಮಾಣವಾಗಿರುವ ದೇವಾಲಯ ವಿಶಾಲ ಆವರಣವನ್ನು ಹೊಂದಿದ್ದು, ಮುಖಮಂಟಪದಲ್ಲಿ ದಶಾವತಾರದ ಕೆತ್ತನೆಗಳು, ಬಲಿಪೀಠ, ಧ್ವಜ ಸ್ತಂಭಗಳು ಆಕರ್ಷಕವಾಗಿವೆ.
ಬೆಟ್ಟವು ತ್ರಯಂಬಕಾದ್ರಿ, ನೀಲಾದ್ರಿ, ಮಂಗಳಾದ್ರಿ, ಶಂಖರಾದ್ರಿಗಿರಿ, ಹಂಸಾದ್ರಿ, ಗರುಡಾದ್ರಿ, ಪಲ್ಲವಾದ್ರಿ, ಮಲ್ಲಿಕಾರ್ಜುನಗಿರಿ ಮೊದಲಾದ ಬೆಟ್ಟಗಳಿಂದ ಸುತ್ತುವರೆದಿದ್ದು, ದೇಗುಲದಲ್ಲಿಅಷ್ಟ ತೀರ್ಥಗಳಿವೆ.
ಪಾಲ್ಗೂಣ ಮಾಸದ ಶ್ರವನ ನಕ್ಷತ್ರ, ಯುಗಾದಿಗೆ ಐದು ದಿನದ ಮುಂಚೆ ಸ್ವಾಮಿಗೆ ಬ್ರಹ್ಮ ರಥೋತ್ಸವ ನಡೆಯುತ್ತದೆ. ಈ ರಥವನ್ನು ಗಿಡದಲ್ಲಿ ಬಿಡುವ ಬಳ್ಳಿಯಲ್ಲಿ ಎಳೆಯಲಾಗುತ್ತದೆ ಇದೆ . ರಾಜ್ಯದ ಅತ್ಯಂತ ಎತ್ತರದ ಬೆಟ್ಟಗಳಲ್ಲಿ ಮೂರನೇ ಬೆಟ್ಟವಾಗಿರುವ ಹಿಮವದ್ ಗೋಪಾಲಸ್ವಾಮಿ ಬೆಟ್ಟ ಬಂಡೀಪುರದಿಂದ 10 ಕಿ.ಮೀ. ದೂರದಲ್ಲಿ ಈ ಸುಂದರ ತಾಣ, ಈ ದೇವಾಲಯ ಪ್ರದೇಶ ದಟ್ಟ ಕಾನನವಾಗಿದ್ದು, ವರ್ಷದ ಎಲ್ಲಾ ದಿನಗಳಲ್ಲೂ ಮಂಜಿನಿಂದ ಆವರಿಸಿರುವ ಬೆಟ್ಟದ ಪ್ರಕೃತಿ ಸೌಂದರ್ಯ ರಮಣೀಯ.