Publish Date: Sun, 09 Jan 2022 (20:21 IST)
Updated Date: Sun, 09 Jan 2022 (20:24 IST)
ಭಾರೀ ಭದ್ರತೆಯ ನಡುವೆ ಪ್ರಧಾನಿ ನರೇಂದ್ರ ಮೋದಿ ರವಿವಾರ ಶ್ರೀನಗರಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅಲ್ಲಿ ಮೊಬೈಲ್ ಸಂಪರ್ಕವನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿತ್ತು ಮತ್ತು ಇಂಟರ್ನೆಟ್ ಸೇವೆಯೂ ಅಲಭ್ಯವಾಗಿತ್ತು. ಇದೇ ವೇಳೆ ಪ್ರಧಾನಿ ಹಲವು ಯೋಜನೆಗಳನ್ನು ಉದ್ಘಾಟಿಸುವ ನಿಮಿತ್ತ ಮೋದಿ ಜಮ್ಮು, ಶ್ರೀನಗರ ಮತ್ತು ಲೇಹ್ ಗೂ ಭೇಟಿ ನೀಡಿದ್ದರು. ಜನಪ್ರಿಯ ದಾಲ್ ಸರೋವರಕ್ಕೂ ತೆರಳಿದ್ದರು.
ದಾಲ್ ಸರೋವರದಲ್ಲಿ ಬೋಟ್ ನಲ್ಲಿ ಪ್ರಯಾಣ ಮಾಡುತ್ತಿದ್ದ ಸಂದರ್ಭದಲ್ಲಿ ಪ್ರಧಾನಿ ಜನರಿಗೆ ಕೈಬೀಸುತ್ತಿರುವ ವೀಡಿಯೊವನ್ನು ಬಿಜೆಪಿಯ ಅಧಿಕೃತ ಖಾತೆಯಲ್ಲಿ ಪ್ರಕಟಿಸಲಾಗಿತ್ತು. ಆದರೆ, ಜನರೇ ಇಲ್ಲದ ಸರೋವರಕ್ಕೆ ಕೈ ಬೀಸಿದ ಪ್ರಧಾನಿಯ ವೀಡಿಯೋ ಕುರಿತು ವ್ಯಾಪಕ ವ್ಯಂಗ್ಯ ವ್ಯಕ್ತವಾಗಿದೆ.
ವೀಡಿಯೊ ಪ್ರಕಾರ ಪ್ರಧಾನಿ ಮೋದಿ ಯಾರಿಗೂ ಕೈಬೀಸುತ್ತಿರುವವಂತೆ ಕಾಣಿಸುತ್ತಿದೆ. ಆದರೆ ಯಾರಿಗೆ ಕೈ ಬೀಸುತ್ತಿದ್ದಾರೆ ಎನ್ನುವುದು ಅಲ್ಲಿ ʼಯಾರೂ ಇರದಿದ್ದʼ ಕಾರಣ ವ್ಯಕ್ತವಾಗಿಲ್ಲ. ಈ ಬಗ್ಗೆ ಕಾಶ್ಮೀರಿಗಳು, "ಇಷ್ಟೊಂದು ಭದ್ರತಾ ವ್ಯವಸ್ಥೆಯಿರುವ ಕಾರಣ ಅಲ್ಲಿ ಯಾರೂ ಇರಲು ಸಾಧ್ಯವೇ ಇಲ್ಲ. ಅದರ ಜೊತೆಗೆ ದಾಲ್ ಸರೋವರವು ತುಂಬಾ ವಿಸ್ತಾರವಾಗಿದೆ. ಆದ್ದರಿಂದ ಪ್ರಧಾನಿ ಯಾರಿಗೆ ಕೈಬೀಸುತ್ತಿದ್ದಾರೆ ಎಂಬುವುದು ಸ್ಪಷ್ಟವಾಗಿಲ್ಲ" ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.