ಬೆಂಗಳೂರು: ಹಿಂದಿನ ಯುಪಿಎ ಸರ್ಕಾರ ಕುಟುಂಬ ರಾಜಕಾರಣ ಮಾಡಿಕೊಂಡು ಭ್ರಷ್ಟ ಆಡಳಿತವನ್ನು ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಸ್ವಚ್ಛ ಮಾಡಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಹೇಳಿದರು.
ಜಯನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿಯವರು ಸ್ವಯಂಸೇವಕನಿಂದ ಆರಂಭವಾಗಿ, ಮುಖ್ಯಮಂತ್ರಿಯಾಗಿ, ಪ್ರಧಾನಮಂತ್ರಿಯಾಗಿ ಈ ಮಟ್ಟಕ್ಕೆ ತಲುಪಿದ್ದಾರೆ.
ಆದರೆ ಕಾಂಗ್ರೆಸ್ ಕುಟುಂಬದಲ್ಲಿ ಹುಟ್ಟಿದರೆ ಪಕ್ಷದ ಅಧ್ಯಕ್ಷನಾಗಬಹುದು. ದೇಶವನ್ನು ಲೂಟಿ ಮಾಡಿದ ಕುಟುಂಬದಲ್ಲಿ ಹೀಗೆಯೇ ನಡೆಯುತ್ತದೆ. ಮನಮೋಹನ್ ಸಿಂಗ್ ಅವಧಿಯಲ್ಲಿ ಎಲ್ಲ ಬಗೆಯ ಭ್ರಷ್ಟಾಚಾರ ಮಾಡಲಾಗಿತ್ತು. ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಸ್ವಚ್ಛ ಆಡಳಿತ ನೀಡಿದ್ದಾರೆ ಎಂದರು.
ಇದೀಗ ಕಾಂಗ್ರೆಸ್ನವರು ಪ್ರಧಾನಿ ಮೇಲೆ ಇವಿಎಂ ಕುರಿತು ಆಪಾದನೆ ಮಾಡುತ್ತಾರೆ. ಗೆದ್ದಿರುವಾಗ ಮಾತನಾಡದೆ ಸೋತಾಗ ಮಾತಾಡುತ್ತಾರೆ ಎಂದರು.
ಭಾರತ ಇದೀಗ ಆರ್ಥಿಕತೆಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದು, ಸೇನಾಬಲದಲ್ಲಿ ಐದನೇ ಸ್ಥಾನದಲ್ಲಿದೆ. ಪ್ರಪಂಚಕ್ಕೆ ಸವಾಲು ಎಸೆಯುವ ಚೀನಾ, ಅಮೆರಿಕ ಕೂಡ ಭಾರತದ ಸ್ನೇಹ ಬಯಸಿದೆ. ಇದಕ್ಕೆ ಕಾರಣ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವ ಎಂದು ಕೊಂಡಾಡಿದರು.