Publish Date: Mon, 15 Jun 2026 (10:55 IST)
Updated Date: Mon, 15 Jun 2026 (11:03 IST)
ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಪ್ರವಾಸಿಗರ ಬೇಜವಾಬ್ದಾರಿತನದ ಮತ್ತೊಂದು ಆಘಾತಕಾರಿ ಕೃತ್ಯ ಬೆಳಕಿಗೆ ಬಂದಿದೆ. ಅರಣ್ಯದ ರಸ್ತೆ ಬದಿಯಲ್ಲಿ ಶಾಂತವಾಗಿ ನಿಂತಿದ್ದ ಕಾಡಾನೆಯೊಂದಕ್ಕೆ ಆಂಧ್ರಪ್ರದೇಶ ಮೂಲದ ಪ್ರವಾಸಿಗರು ಕಲ್ಲು ತೂರಿ ವಿಕೃತ ಆನಂದ ಪಟ್ಟಿದ್ದಾರೆ. ಈ ಕಿಡಿಗೇಡಿಗಳ ಉದ್ಧಟತನದ ಕೃತ್ಯಕ್ಕೆ ಮತ್ತು ವನ್ಯಜೀವಿಗಳ ಮೇಲಿನ ದೌರ್ಜನ್ಯಕ್ಕೆ ಪರಿಸರ ಪ್ರೇಮಿಗಳು ಹಾಗೂ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಮೂಲಕ ಹಾದುಹೋಗುವ ಹೆದ್ದಾರಿಯಲ್ಲಿ ಕಾಡಾನೆಯೊಂದು ರಸ್ತೆ ಬದಿಯ ಪೊದೆಗಳ ಬಳಿ ನಿಂತಿತ್ತು. ಈ ವೇಳೆ ಆ ಮಾರ್ಗವಾಗಿ ಸಾಗುತ್ತಿದ್ದ ಆಂಧ್ರಪ್ರದೇಶ ನೋಂದಣಿಯ (AP26 CB2799) ಹ್ಯುಂಡೈ ಕ್ರೆಟಾ ಕಾರಿನಲ್ಲಿದ್ದ ಪ್ರವಾಸಿಗರು, ನಿಯಮಗಳನ್ನು ಗಾಳಿಗೆ ತೂರಿ ವಾಹನವನ್ನು ನಿಲ್ಲಿಸಿದ್ದಾರೆ. ಅಷ್ಟಕ್ಕೇ ನಿಲ್ಲದೆ, ಆನೆಯನ್ನು ಕೆಣಕುವ ಉದ್ದೇಶದಿಂದ ಅದರ ಮೇಲೆ ಕಲ್ಲು ಎಸೆದಿದ್ದಾರೆ. ಇವರ ಈ ಮೂರ್ಖತನದ ಕೃತ್ಯದಿಂದ ಆನೆ ದಿಢೀರ್ ಕೋಪಗೊಂಡು ವಾಹನದ ಕಡೆಗೆ ತಿರುಗಿದ್ದರೆ ದೊಡ್ಡ ದುರಂತವೇ ಸಂಭವಿಸುತ್ತಿತ್ತು.
ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ವಾಹನ ನಿಲ್ಲಿಸುವುದು, ಹಾರ್ನ್ ಮಾಡುವುದು, ಪ್ಲಾಸ್ಟಿಕ್ ಎಸೆಯುವುದು ಮತ್ತು ವನ್ಯಜೀವಿಗಳಿಗೆ ತೊಂದರೆ ಕೊಡುವುದು ಅಥವಾ ಆಹಾರ ನೀಡುವುದು ಶಿಕ್ಷಾರ್ಹ ಅಪರಾಧವಾಗಿದೆ. ನಾಗರಹೊಳೆಯ ಒಳಭಾಗದ ರಸ್ತೆಗಳಲ್ಲಿ ಸಂಚರಿಸುವಾಗ ವಾಹನದಿಂದ ಕೆಳಗೆ ಇಳಿಯಬಾರದು ಎಂಬ ಕಟ್ಟುನಿಟ್ಟಿನ ನಿಯಮವಿದ್ದರೂ ಪ್ರವಾಸಿಗರು ಇದನ್ನು ಪಾಲಿಸುತ್ತಿಲ್ಲ.
ಈ ಹಿಂದೆಯೂ ಬಂಡೀಪುರ ಮತ್ತು ನಾಗರಹೊಳೆಯಲ್ಲಿ ಇಂತಹ ಹಲವು ಘಟನೆಗಳು ನಡೆದಿದ್ದು, ಆನೆಗಳು ಬೆನ್ನಟ್ಟಿದಾಗ ಪ್ರವಾಸಿಗರು ಪ್ರಾಣಭಯದಿಂದ ಓಡಿದ ಉದಾಹರಣೆಗಳಿವೆ. ಅರಣ್ಯ ಇಲಾಖೆ ಹಲವರಿಗೆ ದಂಡ ವಿಧಿಸಿದ್ದರೂ, ಕೆಲವು ಬೇಜವಾಬ್ದಾರಿ ಪ್ರವಾಸಿಗರಲ್ಲಿ ಇನ್ನೂ ಜಾಗೃತಿ ಮೂಡುತ್ತಿಲ್ಲ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ