Publish Date: Tue, 08 Jan 2019 (18:42 IST)
Updated Date: Tue, 08 Jan 2019 (18:48 IST)
ಲೋಕಸಭಾ ಚುನಾವಣೆಯ ಸಿದ್ಧತೆ ನಡೆಸುವುದು, ಕಾರ್ಯತಂತ್ರ ರೂಪಿಸುವುದು ಹಾಗೂ ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಜತೆ ಚರ್ಚೆ ನಡೆಸಲು ಬರುವಂತೆ ಬಿ.ಎಸ್.ಯಡಿಯೂರಪ್ಪನವರಿಗೆ ಪಕ್ಷದಿಂದ ಬುಲಾವ್ ಬಂದಿದೆ.
ಲೋಕಸಭಾ ಚುನಾವಣೆಯ ಸಿದ್ಧತೆ ಬಗ್ಗೆ ಚರ್ಚೆ ನಡೆಸಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರವರ ಬುಲಾವ್ ಮೇರೆಗೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ದೆಹಲಿಗೆ ತೆರಳಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ತುಮಕೂರಿನಲ್ಲಿ ಲೋಕಸಭಾ ಚುನಾವಣೆ ಸಿದ್ಧತೆಯ ಸಭೆಯಲ್ಲಿ ಪಾಲ್ಗೊಳ್ಳಬೇಕಿತ್ತು. ಕೊನೆ ಸಮಯದಲ್ಲಿ ಅಮಿತ್ ಶಾ ರವರ ಪ್ರವಾಸ ರದ್ದಾಗಿದೆ. ಹೀಗಾಗಿ ಯಡಿಯೂರಪ್ಪನವರಿಗೆ ದೆಹಲಿಗೆ ಬರುವಂತೆ ಅಮಿತ್ ಶಾ ದಿಢೀರ್ ಬುಲಾವ್ ಕಳುಹಿಸಿದ್ದು, ಯಡಿಯೂರಪ್ಪನವರು ತೆರಳಿದ್ದಾರೆ.
ಯಡಿಯೂರಪ್ಪನವರ ಜತೆ ಶಿವಮೊಗ್ಗ ಸಂಸದ ರಾಘವೇಂದ್ರ ದೆಹಲಿಗೆ ಪ್ರಯಾಣಿಸಿದ್ದು, ಶಿವಮೊಗ್ಗದ ಸಿಂಗಧೂರು ಸೇತುವೆ ಸಂಬಂಧ ಕೇಂದ್ರ ಸಚಿವ ನಿತಿನ್ ಗಡ್ಕರಿ ಜತೆ ಯಡಿಯೂರಪ್ಪ ಸಭೆ ನಡೆಸುವರು. ಈ ಸಭೆಯಲ್ಲಿ ರಾಘವೇಂದ್ರ ಪಾಲ್ಗೊಳ್ಳುವರು. ಒಂದೇ ವಿಮಾನದಲ್ಲಿ ಯಡಿಯೂರಪ್ಪ- ಸಚಿವ ಡಿ.ಕೆ.ಶಿವಕುಮಾರ್ ದೆಹಲಿಯಲ್ಲಿ ಬಂದಿಳಿದದ್ದು ಹಲವು ಚರ್ಚೆಗೆ ಕಾರಣವಾಗಿದೆ.