Publish Date: Thu, 30 May 2024 (18:15 IST)
Updated Date: Thu, 30 May 2024 (18:53 IST)
ನವದೆಹಲಿ: ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಅವರು ಇಂದು ಪಂಜಾಬ್ನ ಹೋಶಿಯಾರ್ಪುರದಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸುವ ಮೂಲಕ ಲೋಕಸಭೆ ಚುನಾವಣೆ 2024ರ ಕೊನೆಯ ಪ್ರಚಾರಕ್ಕೆ ಈ ಮೂಲಕ ಅಂತ್ಯ ಹಾಡಿದರು.
ಈ ಬಾರಿಯೂ ಅಧಿಕಾರದ ಚುಕ್ಕಾಣಿ ಹಿಡಿಯುವ ಭರವಸೆಯಲ್ಲಿರುವ ಭಾರತೀಯ ಜನತಾ ಪಕ್ಷವು ಮೂರನೇ ಬಾರಿ ಸತತ ಗೆಲುವಿನ ನಿರೀಕ್ಷೆಯಲ್ಲಿದೆ. ಇನ್ನೂ ಬಹುಮತದೊಂದಿಗೆ ಜಯ ಸಾಧಿಸಬೇಕೆಂಬ ಗುರಿಯಿಂದ ಪ್ರಧಾನಿ ಮೋದಿ ಅವರು ಚುನಾವಣೆ ದಿನಾಂಕ ಘೋಷಣೆ ಆದ ಬೆನ್ನಲ್ಲೇ ದೇಶದ ಉದ್ದಗಲಕ್ಕೂ ಪ್ರಯಾಣ ಬೆಳೆಸಿ ಬಿರುಸಿನ ಪ್ರಚಾರದಲ್ಲಿ ತೊಡಗಿದರು
ಇದೀಗ ಪ್ರಚಾರ ಮುಗಿಸಿ ಧ್ಯಾನದ ಕಡೆ ಮುಖ ಮಾಡಿರುವ ಮೋದಿ ಅವರು ಇಂದು ಸಂಜೆಯಿಂದ ಜೂನ್ 1ರ ವರೆಗೆ ತಮಿಳುನಾಡಿನ ಕನ್ಯಾಕುಮಾರಿಗೆ ಭೇಟಿ ನೀಡಲಿದ್ದಾರೆ.
ಪ್ರಧಾನಿ ಮೋದಿ ಅವರು ಮಾರ್ಚ್ 16 ರಂದು ಕನ್ಯಾಕುಮಾರಿಯಲ್ಲಿ ಲೋಕಸಭೆ ಚುನಾವಣೆಗೆ ಪ್ರಚಾರವನ್ನು ಆರಂಭಿಸಿದರು. 75 ದಿನಗಳಲ್ಲಿ 200 ಕ್ಕೂ ಹೆಚ್ಚು ಚುನಾವಣಾ ಪ್ರಚಾರ ಕಾರ್ಯಕ್ರಮಗಳನ್ನು ಪ್ರಧಾನಿ ನಡೆಸಿದರು, ಇದರಲ್ಲಿ ಅವರ ರ್ಯಾಲಿಗಳು ಮತ್ತು ರೋಡ್ಶೋಗಳು ಸೇರಿವೆ.
ಏಳು ಹಂತದ ಲೋಕಸಭೆ ಚುನಾವಣೆಗೆ ಪ್ರಧಾನಿ ಮೋದಿ ವಿವಿಧ ಕ್ಷೇತ್ರಗಳಲ್ಲಿ ರ್ಯಾಲಿ ನಡೆಸಿದರು. ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಮತ್ತು ಒಡಿಶಾ ಸೇರಿದಂತೆ ಅವರು ಹೆಚ್ಚಿನ ರೋಡ್ಶೋಗಳು ಮತ್ತು ರ್ಯಾಲಿಗಳನ್ನು ನಡೆಸಿದ ಕೆಲವು ಪ್ರಮುಖ ರಾಜ್ಯಗಳು.
ಅದಲ್ಲದೆ ಮಾಧ್ಯಮ ಸಂಸ್ಥೆಗಳ ಸಂದರ್ಶನದಲ್ಲೂ ಮೋದಿ ಅವರು ಭಾಗವಹಿಸಿದರು.
ಇನ್ನೂ ಪ್ರಚಾರದ ವೇಳೆ ಧರ್ಮದ ಆಧಾರದ ಮೇಲೆ ಮೀಸಲಾತಿ, ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ), ಅಯೋಧ್ಯೆಯಲ್ಲಿ ರಾಮ ಮಂದಿರ, ಜಮ್ಮು ಮತ್ತು ಕಾಶ್ಮೀರದಲ್ಲಿ 370 ನೇ ವಿಧಿಯನ್ನು ರದ್ದುಗೊಳಿಸುವುದು ಮತ್ತು ಇತರ ವಿಷಯಗಳ ಬಗ್ಗೆ ಅವರು ಪ್ರತಿಪಕ್ಷಗಳ ಮೇಲೆ ವಾಗ್ದಾಳಿ ನಡೆಸಿದರು.