ಬೆಳಗಾವಿ: ಎಂಇಎಸ್ ಕಾರ್ಯಕರ್ತರು ಕರ್ನಾಟಕ ರಾಜ್ಯೋತ್ಸವ ದಿನದಂದು ಬೆಳಗಾವಿಯಲ್ಲಿ ಕರಾಳ ದಿನ ಆಚರಿಸುವುದನ್ನು ಎಂಎನ್'ಎಸ್ ಮುಖಂಡ ರಾಜ್ ಠಾಕ್ರೆ ತೀವ್ರವಾಗಿ ಖಂಡಿಸಿದ್ದಾರೆ.
ಮುಂಬೈನಲ್ಲಿ ಸಂವಾದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಒಂದು ವೇಳೆ ನಾನು ಮಹಾರಾಷ್ಟ್ರದ ಮುಖ್ಯಮಂತ್ರಿ ಆಗಿದ್ದಿದ್ದರೆ ಮಹಾರಾಷ್ಟ್ರದ ವಿರುದ್ದ ಯಾವುದಾದರೂ ಪಾಲಿಕೆ ಕರಾಳ ದಿನ ಅಚರಿಸಿದ್ದಿದ್ದರೆ ಅವರನ್ನೆಲ್ಲ ಸದೆ ಬಡಿಯುತ್ತಿದ್ದೆ. ಯಾವುದೇ ವಿವಾದ ಇತ್ಯರ್ಥ ಆಗದೇ ಇರುವಾಗ ಹೀಗೆಲ್ಲ ಕರಾಳ ದಿನ ಎಂದು ಆಚರಿಸಿರುವುದು ಸರಿಯಲ್ಲ. ಅದರಲ್ಲೂ ಕರ್ನಾಟಕದ ಜನತೆಯ ಸಂಭ್ರಮದ ದಿನವನ್ನು ಕರಾಳ ದಿನ ಅಂತ ಆಚರಿಸಿದ್ದು ವಿಕೃತ ಮನಸ್ಸಿನ ಸ್ಥಿತಿ ಆಕ್ರೋಶ ವ್ಯಕ್ತಪಡಿಸಿದರು.
ಗಡಿ ವಿವಾದದ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದೆ. ಅದು ಇತ್ಯರ್ಥವಾಗುವವರೆಗೆ ಸುಮ್ಮನಿರಬೇಕು. ಅಸಂಬದ್ಧ ಹೋರಾಟ ಮಾಡುವ ಬದಲು ಮಹಾರಾಷ್ಟ ಪರ ವಕೀಲರು ಸಮರ್ಥವಾಗಿ ವಾದ ಮಂಡಿಸುವಂತೆ ಒತ್ತಡ ಹಾಕಿ ಎಂದ ರಾಜ್ ಠಾಕ್ರೆ, ಎಂಇಎಸ್ ನಾಯಕರು ಬೆಳಗಾವಿಯಲ್ಲಿ ಏನಾದರೂ ಸಮಸ್ಯೆ ಮಾಡಿ ಬಳಿಕ ನನ್ನಲ್ಲಿ ಬರುತ್ತಾರೆ. ಆಮೇಲೆ ಸಿಎಂ, ಇನ್ಯಾರಲ್ಲಿಯೋ ಹೋಗ್ತಾರೆ. ಇವೆಲ್ಲ ಯಾತಕ್ಕಾಗಿ ಎಂದು ಅರ್ಥವಾಗುತ್ತಿಲ್ಲ ಎಂದು ಕಿಡಿಕಾರಿದರು.
ಕರ್ನಾಟಕದ ಜ್ಞಾನ ಪೀಠ ಪ್ರಶಸ್ತಿ ವಿಜೇತರೊಬ್ಬರು ಬೆಳಗಾವಿ, ಕಾರವಾರ ಬಗ್ಗೆ ಮಾತನಾಡಿದರೆ ಅವರ ಮುಖಕ್ಕೆ ಮಸಿ ಬಳಿಯಿರಿ ಅಂತ ಈ ಎಂಇಎಸ್'ನ ಕೆಲವರು ಹೇಳುತ್ತಾರೆ. ಉತ್ತರ ಪ್ರದೇಶ, ಬಿಹಾರದ ಜನ ಬಂದು ಮಹಾರಾಷ್ಟ್ರದ ಜ್ಞಾನ ಪೀಠ ಪ್ರಶಸ್ತಿ ವಿಜೇತರ ಮುಖಕ್ಕೆ ಮಸಿ ಬಳಿದರೆ ಅವರನ್ನು ನಾವೇನು ಮಾಡಬಹುದು ಹೇಳಿ?. ಕಳೆದ 65 ವರ್ಷಗಳಿಂದ ಎಂಇಎಸ್ ನವರು, ಬೆಳಗಾವಿ ಕರ್ನಾಟಕದಿಂದ ಬಿಡುಗಡೆ ಹೊಂದಲಿದೆ ಎಂದು ಬೆಳಗಾವಿ ಜನರನ್ನು ಮೂರ್ಖರನ್ನಾಗಿ ಮಾಡುತ್ತಿದ್ದಾರೆ. ಇದು ಯಾವತ್ತೂ ಸಾಧ್ಯವಿಲ್ಲದ ಮಾತು. ಜನರ ಭಾವನೆ ಜೊತೆ ಆಟವಾಡುವುದಷ್ಟೇ ಇವರ ಉದ್ದೇಶ. ಸಾರ್ವಜನಿಕರು ಸಹ ಇದನ್ನು ಅರಿಯಬೇಕು ಎಂದರು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ