Publish Date: Mon, 06 May 2024 (20:25 IST)
Updated Date: Mon, 06 May 2024 (20:31 IST)
ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಪ್ರಕರಣ ಇಡೀ ದೇಶದಲ್ಲೇ ದೊಡ್ಡ ಸದ್ದು ಮಾಡುತ್ತಿದೆ. ತನಿಖೆ ಚುರುಕುಗೊಳಿಸಿರುವ ಎಸ್ಐಟಿ ತಂಡ ಸಂತ್ರಸ್ಥೆಯರನ್ನು ಕರೆತಂದು ಸ್ಥಳ ಮಹಜರು ಮಾಡಿದ್ದಾರೆ.
ಇದೀಗ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಹಂಚಿಕೆ ಹಿಂದೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಕೈವಾಡವಿದೆ ಎಂದು ಹಾಸನದ ವಕೀಲ, ಬಿಜೆಪಿ ಮುಖಂಡ ದೇವರಾಜೇಗೌಡ ಈ ಆರೋಪ ಮಾಡಿದ್ದಾರೆ.
ನಗರದ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪ್ರಕರಣದ ಹಿಂದಿನ ರೂವಾರಿ ಬೇರೆ ಯಾರೂ ಅಲ್ಲ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಎಂದು ಗಂಭೀರ ಆರೋಪ ಮಾಡಿದರು.
ಪೆನ್ ಡ್ರೈವ್ ವಿಡಿಯೋ ವೈರಲ್ ಮಾಡುವ ಪ್ಲ್ಯಾನಿಂಗ್ ಸಿದ್ದರಾಮಯ್ಯ ಸರ್ಕಾರದ್ದು. ಸದ್ಯ ವೈರಲ್ ಆಗಿರುವ ವಿಡಿಯೋಗಳು ನನ್ನ ಪೆನ್ ಡ್ರೈವ್ನಲ್ಲಿ ಇರೋದಲ್ಲ. ಈಗ ಹೊರ ಬಂದಿರುವ ವಿಡಿಯೋಗೂ ನನಗೂ ಸಂಬಂಧ ಇಲ್ಲ. ಈ ವೀಡಿಯೋಗಳೆಲ್ಲವೂ ಮಿಕ್ಸಿಂಗ್ ವಿಡಿಯೋಗಳು. ಇದು ಸಂಪೂರ್ಣವಾಗಿ ಆರೋಪಿಗೆ ಸಂಬಂಧಿಸಿದ್ದಲ್ಲ. ಅಸಲಿಗೆ ಇರೋದು 2 ಗಂಟೆ 37 ನಿಮಿಷ ವೀಡಿಯೋ ಮಾತ್ರ ಎಂದು ತಿಳಿಸಿದರು.
ಪ್ರಜ್ವಲ್ ರೇವಣ್ಣ ಮಾಜಿ ಕಾರು ಚಾಲಕ ಕಾರ್ತಿಕ್ ಹಾಸನದ ನನ್ನ ಗೃಹ ಕಚೇರಿಯಲ್ಲಿ ಈ ಪೆನ್ ಡ್ರೈವ್ ಕೊಟ್ಟಿದ್ದ. ಎಸ್ಐಟಿಗೆ ನನ್ನ ಬಳಿ ಇರುವ ದಾಖಲೆ ಕೊಟ್ಟಿದ್ದೇನೆ. ಎಲ್ಲವನ್ನೂ ಅವರಿಗೆ ಕೊಟ್ಟಿದ್ದೇನೆ. ಆದರೆ, ಕಾಂಗ್ರೆಸ್ ಸರ್ಕಾರ ನಿಜವಾದ ಆರೋಪಿಗಳನ್ನು ಬಚ್ಚಿಟ್ಟುಕೊಂಡಿದೆ. ಸಂತೃಸ್ತರಿಗೆ ಹಣ ಕೊಟ್ಟುಕರ್ಕೊಂಡು ಬಂದಿದ್ದಾರೆ. ಎಲ್ ಆರ್ ಶಿವರಾಮೇಗೌಡರನ್ನು ಮಧ್ಯವರ್ತಿಯಾಗಿ ಕಳುಹಿಸಲಾಗಿದೆ. ಪ್ರಕರಣದ ಸತ್ಯಾಸತ್ಯತೆ ತಿಳಿಯಲು ಸಿಬಿಐಗೆ ವಹಿಸಬೇಕು, ನಾನು ಎಲ್ಲಾ ದಾಖಲೆ ಕೊಡುತ್ತೇನೆ ಎಂದರು.