Publish Date: Sun, 18 Sep 2022 (08:32 IST)
Updated Date: Sun, 18 Sep 2022 (10:35 IST)
ಬಳ್ಳಾರಿ : ವಿಮ್ಸ್ ದುರಂತಕ್ಕೆ ದಿನಕ್ಕೊಂದು ತಿರುವು ಸಿಗುತ್ತಿದೆ. ಘಟನೆ ನಡೆದು ಇಷ್ಟು ದಿನವಾದರೂ ವಿಮ್ಸ್ಗೆ ಭೇಟಿ ನೀಡದ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ವಿರುದ್ಧ ಸ್ವಪಕ್ಷೀಯ ಶಾಸಕರೇ ಮುಗಿ ಬಿದ್ದಿದ್ದು, ಸಚಿವರ ನಿರ್ಲಕ್ಷ್ಯದಿಂದಲೇ ಘಟನೆ ನಡೆದಿರೋದು ಎಂದು ಆರೋಪಿಸಿದ್ದಾರೆ.
ಆರೋಪಗಳ ಬಳಿಕ ಎಚ್ಚೆತ್ತಿರುವ ಸುಧಾಕರ್ ಇಂದು ವಿಮ್ಸ್ಗೆ ಭೇಟಿ ನೀಡಲಿದ್ದಾರೆ. ಘಟನೆ ಬಗ್ಗೆ ಅಧಿಕಾರಿಗಳಿಂದ ವಿವರಣೆ ಪಡೆಯಲಿದ್ದಾರೆ. ವಿಮ್ಸ್ ದುರಂತ ಬಗ್ಗೆ ಶ್ರೀರಾಮುಲು ಮತ್ತೊಮ್ಮೆ ತಮ್ಮ ಹೇಳಿಕೆಯನ್ನು ಪುನರುಚ್ಚರಿಸಿದ್ದಾರೆ.
ಆಸ್ಪತ್ರೆಯಲ್ಲಿ ಕರೆಂಟ್ ಕಟ್ನಿಂದ ಸಮಸ್ಯೆ ಆಗಿಲ್ಲ. ಆಸ್ಪತ್ರೆಯಲ್ಲಿ ವೆಂಟಿಲೇಟರ್ ಚೆನ್ನಾಗಿಯೇ ಕೆಲಸ ಮಾಡುತ್ತಿದೆ. ಆಕ್ಸಿಜನ್ ಸರಬರಾಜಿಗೆ ವಿದ್ಯುತ್ ಸಂಪರ್ಕ ಬೇಕಿಲ್ಲ. ಯಾವುದೇ ಕೇಬಲ್ ಬ್ಲಾಸ್ಟ್ ಆಗಿಲ್ಲ ಎಂದಿದ್ದಾರೆ.
ಜೊತೆಗೆ ನಿನ್ನೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿದ ಡಾ. ಕೆ ಸುಧಾಕರ್, ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ವಿಮ್ಸ್ಗೆ ಭೇಟಿ ನೀಡ್ತೇನೆ. ಸಾವು ಸಾವೇ, ಈಗಾಗಲೇ ಸರ್ಕಾರ ಪರಿಹಾರ ಘೋಷಣೆ ಮಾಡಿದೆ. ಮುಂದೆ ಈ ರೀತಿ ಆಗದಂತೆ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದರು.