Select Your Language

Notifications

webdunia
webdunia
webdunia
webdunia

ನಟ ಪುನೀತ್ ನಿಧನಕ್ಕೆ ಸಚಿವರ ತೀವ್ರ ಸಂತಾಪ

ನಟ ಪುನೀತ್ ನಿಧನಕ್ಕೆ ಸಚಿವರ ತೀವ್ರ ಸಂತಾಪ
bangalore , ಶುಕ್ರವಾರ, 29 ಅಕ್ಟೋಬರ್ 2021 (21:44 IST)
ಬೆಂಗಳೂರು: ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸರಕಾರಿ ಐಟಿಐ ಸಂಸ್ಥೆಗಳ ಪ್ರಚಾರ ರಾಯಭಾರಿಯಾಗಿದ್ದ ಜನಪ್ರಿಯ ಚಿತ್ರನಟ ಪುನೀತ್ ರಾಜಕುಮಾರ್ ಅವರ ಹಠಾತ್ ನಿಧನಕ್ಕೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ತೀವ್ರ ದಿಗ್ಭ್ರಮೆ ಮತ್ತು ಸಂತಾಪ ವ್ಯಕ್ತಪಡಿಸಿದ್ದಾರೆ. 
 
`ಸರಕಾರಿ ಐಟಿಐಗಳಿಗೆ ಹುಡುಗರು ಹೆಚ್ಚಿನ ಸಂಖ್ಯೆಯಲ್ಲಿ ಬರದೆ ಇದ್ದುದು ನನಗೆ ಕಳವಳ ಹುಟ್ಟಿಸಿತ್ತು. ಅದರಲ್ಲೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಐಟಿಐ ಮಾಡಿಕೊಂಡರೆ ಒಂದು ಕೆಲಸವಾದರೂ ಸಿಕ್ಕುತ್ತದೆ; ಹೀಗಾಗಿ ಅವರನ್ನು ಇವುಗಳತ್ತ ಸೆಳೆಯಬೇಕೆನ್ನುವುದು ನನ್ನ ಉದ್ದೇಶವಾಗಿತ್ತು. ಈ ಆಲೋಚನೆಯನ್ನು ಪುನೀತ್ ಅವರೊಂದಿಗೆ ಹಂಚಿಕೊಂಡಾಗ ಅವರು ನಮ್ಮ ಬೆಂಬಲಕ್ಕೆ ಬಂದಿದ್ದರು’ ಎಂದು ಅವರು ನೆನಪಿಸಿಕೊಂಡಿದ್ದಾರೆ. 
 
ಗ್ರಾಮೀಣ ಭಾಗದ ಯುವಜನರಿಗೆ ಒಳ್ಳೆಯ ವಿದ್ಯಾಭ್ಯಾಸ ಸಿಗಬೇಕು ಎನ್ನುವುದು ಅವರ ಕಳಕಳಿಯಾಗಿತ್ತು. ಅವರ ಬದುಕು ಹಸನಾಗಬೇಕೆಂದು ಸದಾ ಹೇಳುತ್ತಿದ್ದರು. ಇದಕ್ಕೆ ತಕ್ಕಂತೆ ಅವರು ಪ್ರತಿಫಲಾಪೇಕ್ಷೆ ಇಲ್ಲದೆ ನಮ್ಮ ಪ್ರಚಾರ ರಾಯಭಾರಿ (ಬ್ರ್ಯಾಂಡ್ ಅಂಬಾಸಿಡರ್) ಆದರು. ಇದಕ್ಕೆ ಸಂಬಂಧಿಸಿದ ಚಿತ್ರೀಕರಣದಲ್ಲಿ ಪುನೀತ್ ಅವರು ತಮ್ಮನ್ನು ತೊಡಗಿಸಿಕೊಂಡಿದ್ದರು. ಇಂತಹ ಸಮಾಜಮುಖಿ ಪ್ರಜ್ಞೆ ಅವರ ಅಂತರಂಗದಲ್ಲಿ ಮನೆಮಾಡಿತ್ತು,’ ಎಂದು ಸಚಿವರು ಹೇಳಿದ್ದಾರೆ. 
 
ಗ್ರಾಮೀಣ ಮಹಿಳಾ ಸ್ವಸಹಾಯ ಗುಂಪುಗಳು, ದೀಪಾವಳಿ ಸಲುವಾಗಿ ತಯರಿಸಿರುವ ಮಣ್ಣಿನ‌ ದೀಪಗಳ ಮಾರಾಟಕ್ಕೂ ಸಹಕರಿಸಿದ್ದರು. ಎಲ್ಲರೂ ತೆಗೆದುಕೊಳ್ಳಿ ಎಂದು ಹೇಳುವ ವಿಡಿಯೊ ಚಿತ್ರೀಕರಣ ಕೂಡ ಇತ್ತೀಚೆಗೆ ನಡೆದಿತ್ತು. ಗ್ರಾಮೀಣ ಮಹಿಳೆಯರಿಗೆ ನನ್ನ ಬೆಂಬಲ ಸದಾ ಇರುತ್ತೆ ಎಂದೂ ಪುನಿತ್ ಹೇಳಿದ್ದರು ಎಂದು ಸಚಿವರು ಸ್ಮರಿಸಿದರು.
 
ರಚನಾತ್ಮಕ ಕಾರ್ಯಕ್ರಮಗಳಿಗೆ ನಮ್ಮೊಂದಿಗೆ ಹೆಗಲು ಕೊಡುತ್ತಿದ್ದ ಪುನೀತ್ ಈಗ ಇಲ್ಲವೆಂದರೆ ನಂಬಲಾಗುತ್ತಿಲ್ಲ. ಯುವಜನರ ಪಾಲಿಗೆ ನಿಜವಾದ ಐಕಾನ್ ಆಗಿದ್ದ ಅವರ ನಿಧನದಿಂದ ಕನ್ನಡ ನಾಡು-ನುಡಿ ಬಡವಾಗಿದ್ದು, ಸಾಂಸ್ಕೃತಿಕ ರಂಗದಲ್ಲಿ ಶೂನ್ಯ ಸೃಷ್ಟಿಯಾಗಿದೆ. ಅವರ ಸ್ಥಾನವನ್ನು ಬೇರೆ ಯಾರಿಂದಲೂ ತುಂಬುವುದು ಸಾಧ್ಯವಿಲ್ಲ ಎಂದು ಅವರು ಕಂಬನಿ ಮಿಡಿದಿದ್ದಾರೆ. 
 
ಮಲ್ಲೇಶ್ವರಂ ಕ್ಷೇತ್ರದ ನಿವಾಸಿಯೂ ಆಗಿದ್ದ ಅವರ ಮತ್ತು ನಮ್ಮ ಕುಟುಂಬಗಳ ನಡುವೆ ಆತ್ಮೀಯ ಮತ್ತು ನಿಕಟ ಒಡನಾಟವಿತ್ತು. ಅವರು ಯಾವುದೇ ಹಮ್ಮುಬಿಮ್ಮುಗಳಿಲ್ಲದೆ ಎಲ್ಲರೊಂದಿಗೂ ಮುಕ್ತವಾಗಿ ಬೆರೆತು, ಒಂದಾಗುತ್ತಿದ್ದರು ಎಂದು ಅವರು ನೆನಪಿಸಿಕೊಂಡಿದ್ದಾರೆ. 
 
ಅವರ ನಿಧನದಿಂದ ಉಂಟಾಗಿರುವ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಪರಮಾತ್ಮನು ಅವರ ಕುಟುಂಬದ ಸದಸ್ಯರಿಗೆ, ಬಂಧುಬಾಂಧವರಿಗೆ ಮತ್ತು ಅಭಿಮಾನಿಗಳಿಗೆ ನೀಡಿ, ಪುನೀತ್ ಅವರ ಆತ್ಮಕ್ಕೆ ಶಾಂತಿಯನ್ನು ಕರುಣಿಸಲಿ ಎಂದು ಅಶ್ವತ್ಥನಾರಾಯಣ ಪ್ರಾರ್ಥಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪುನೀತ್ ರಾಜಕುಮಾರ್ ಗೆ ಅಂತಿಮ ನಮನ