Publish Date: Sat, 02 Mar 2024 (17:01 IST)
Updated Date: Sat, 02 Mar 2024 (17:03 IST)
ಬೆಂಗಳೂರು-ಮಾದವಾರದಿಂದ ತುಮಕೂರಿಗೆ 52.41 ಕಿ.ಮೀ ದೂರವಿದ್ದು, ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಮೆಟ್ರೋ ಸಂಪರ್ಕ ನಿರ್ಮಾಣವಾಗುವ ಸಾಧ್ಯತೆಗಳಿವೆ. ಮಾರ್ಚ್ 1ರಿಂದ ಟೆಂಡರ್ ದಾಖಲೆಗಳನ್ನು ನಿಗಮದ ವೆಬ್ಸೈಟ್ ನಿಂದ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದ್ದು, ಬಿಡ್ ಸಲ್ಲಿಸಲು ಏಪ್ರಿಲ್ 2 ಅಂತಿಮ ದಿನವಾಗಿರುತ್ತದೆ. ಇತ್ತೀಚೆಗೆ ಮಂಡಿಸಿದ 2024-25ರ ತಮ್ಮ ಬಜೆಟ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನಿಂದ ತುಮಕೂರು ಮತ್ತು ದೇವನಹಳ್ಳಿಗೆ ಮೆಟ್ರೋ ಸಂಪರ್ಕ ನಿರ್ಮಿಸುವ ಬಗ್ಗೆ ಪ್ರಸ್ತಾಪಿಸಿದ್ದರು.
ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ(ಬಿಎಂಆರ್ಸಿಎಲ್) ಬೆಂಗಳೂರಿನ ಮಾದಾವಾರದಿಂದ ತುಮಕೂರುವರೆಗೆ ಮೆಟ್ರೋ ಸಂಪರ್ಕ ಕಲ್ಪಿಸಲು ಕಾರ್ಯಸಾಧ್ಯತೆಯನ್ನು ಅಧ್ಯಯನ ಮಾಡಲು ಮುಕ್ತ ಟೆಂಡರ್ ಆಹ್ವಾನಿಸಲಾಗಿದೆ.ಶೀಘ್ರವೇ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೇವನಹಳ್ಳಿಯವರೆಗೆ ಮೆಟ್ರೋ ಸಂಪರ್ಕ ಕುರಿತು ಕಾರ್ಯಸಾಧ್ಯತೆ ಕುರಿತು ಅಧ್ಯಯನ ನಡೆಸಲು ಬಿಎಂಆರ್ಸಿಎಲ್ ಟೆಂಡರ್ ಆಹ್ವಾನಿಸಲಿದೆ ಎಂದು ತಿಳಿದು ಬಂದಿದೆ.
ಆರಂಭದಲ್ಲಿ ನಮ್ಮ ಮೆಟ್ರೋದ ಹಸಿರು ಮಾರ್ಗವನ್ನು ಮಾದಾವಾರದಿಂದ ಕುಣಿಗಲ್ ಕ್ರಾಸ್ವರೆಗೆ 11 ಕಿಮೀವರೆಗೆ ವಿಸ್ತರಿಸಲು ಸರ್ಕಾರ ನಿರ್ಧರಿಸಿತ್ತು. ಆದರೆ ಗೃಹ ಸಚಿವರು ಮತ್ತು ತುಮಕೂರು ಜಿಲ್ಲೆಯ ಕೊರಟಗೆರೆ ಶಾಸಕರು ಮತ್ತು ಗೃಹ ಸಚಿವ ಡಾ.ಜಿ. ಪರಮೇಶ್ವರ ಅವರು ಮೆಟ್ರೋ ಜಾಲವನ್ನು ತಮ್ಮ ತವರು ಜಿಲ್ಲೆ ತುಮಕೂರಿಗೆ ವಿಸ್ತರಿಸಲು ಆಸಕ್ತಿ ತೋರಿಸಿದ್ದಾರೆ.ಬೆಂಗಳೂರಿನ ಒಳಗೆ 34 ಕಿಮೀ ಉದ್ದದ ಸುರಂಗ ಮಾರ್ಗ, ವೈಟ್ ಫೀಲ್ಡ್ ನಿಂದ ದೊಮ್ಮಲೂರುವರೆಗಿನ 16 ಕಿಮೀ, ಕಾಟಂನಲ್ಲೂರು ಗೇಟ್ ನಿಂದ ಸರ್ಜಾಪುರ ರಸ್ತೆ ಮತ್ತು ಹೆಬ್ಬಾಳವರೆಗಿನ 52 ಕಿಮೀ ಮಾರ್ಗದ ಮೆಟ್ರೋ ಜಾಲ ನಿರ್ಮಾಣವಾಗಲಿದೆ. ಸಧ್ಯಕ್ಕೆ ಈ ಜಾಲ ಕುರಿತು ಸರಕಾರ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲವಾದರೂ ಸಾಧ್ಯತೆಗಳನ್ನು ಅಲ್ಲಗಳೆಯಲಾಗದು ಎಂದು ಬಿ ಎಂ ಆರ್ ಸಿ ಎಲ್ ತಿಳಿಸಿದೆ.