ಕಲ್ಬುರ್ಗಿಯ ಅಫಜಲಪುರ ಗ್ರಾಮದ ಗೌರ್(ಕೆ) ಗ್ರಾಮದ ಭೂಗರ್ಭದಲ್ಲಿ ಪತ್ತೆಯಾಗಿರುವ ಶಿವಲಿಂಗಗಳಿಗೆ ಪೂಜೆ ಸಲ್ಲಿಸಲು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸಾಗರೋಪಾದಿಯಲ್ಲಿ ಹರಿದು ಬಂದು ಶಿವಲಿಂಗದ ದರ್ಶನ ಪಡೆದು ಪೂಜೆ ಪುನಸ್ಕಾರ ಸಲ್ಲಿಸಿದ್ದಾರೆ. ಈ ಶಿವಲಿಂಗಗಳು ಮಲ್ಲಿಕಾರ್ಜುನ ದೇವಸ್ಧಾನದ ಅವಶೇಷಗಳು ಎಂದು ಹೇಳಲಾಗುತ್ತಿದೆ.
ಗೌರ್ (ಕೆ) ಗ್ರಾಮದಲ್ಲಿ ಶಿವಲಿಂಗಗಳು ಇರುವ ಬಗ್ಗೆ ಶಿವಾಚಾರ್ಯ ಸ್ವಾಮೀಜಿಗೆ ಕನಸು ಬಿದ್ದಿತ್ತು. ಈ ಕುರಿತು ಅವರು ಜನರಿಗೆ ಮನದಟ್ಟು ಮಾಡಿದಾಗ ಅದನ್ನು ಯಾರೂ ನಂಬಿರಲಿಲ್ಲ. ಆದರೆ ಸ್ವತಃ ಶಿವಾಚಾರ್ಯ ಸ್ವಾಮೀಜಿಯವರು ಶಿವಪ್ಪ ದಫೇದಾರ್ ಎಂಬವರ ಜಮೀನಿನಲ್ಲಿ ಗುದ್ದಲಿ ಹಿಡಿಯಲು ಅಗೆಯಲು ಪ್ರಾರಂಭಿಸಿದಾಗ ಶಿವಲಿಂಗಗಳು ಪತ್ತೆಯಾಗಿವೆ.
ಭೂಗರ್ಭದಲ್ಲಿ 20 ಅಡಿ ಆಳದಲ್ಲಿ ಈ ಶಿವಲಿಂಗಗಳು ಪತ್ತೆಯಾಗಿದ್ದು, ಪುರಾತತ್ವ ಇಲಾಖೆ ಅಧಿಕಾರಿಗಳು ಅಲ್ಲಿಗೆ ಭೇಟಿ ನೀಡಿ ಪರಿಶೀಲನೆ ಮಾಡಲಿದ್ದು, ಅದಾದ ನಂತರವೇ ಶಿವಲಿಂಗ ಅಲ್ಲಿ ಹೇಗೆ ಬಂತು ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗುವ ಸಾಧ್ಯತೆಯಿದೆ.