Publish Date: Wed, 20 Mar 2024 (17:31 IST)
Updated Date: Wed, 20 Mar 2024 (17:37 IST)
ಬೆಂಗಳೂರು: ಲೋಕಸಭೆ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಬಹುತೇಕ ಅಂತಿಮವಾಗಿದ್ದು, ಅದಕ್ಕೆ ಮುಂಚೆ ಬಾಗಲಕೋಟೆ ಟಿಕೆಟ್ ವಿಚಾರಕ್ಕೆ ಬಂಡಾಯ ಭುಗಿಲೆದ್ದಿದೆ.
ಸಚಿವ ಶಿವಾನಂದ ಪಾಟೀಲ್ ಪುತ್ರಿ ಸಂಯುಕ್ತಾ ಪಾಟೀಲ್ಗೆ ಟಿಕೆಟ್ ನೀಡಬಾರದೆಂದು ಬಾಗಲಕೋಟೆಯಲ್ಲಿ ಕಾಂಗ್ರೆಸ್ನ ಒಂದು ಗುಂಪು ರಸ್ತೆಗಿಳಿದು, ಟಯರ್ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ಬಾಗಲಕೋಟೆ ಕಾಂಗ್ರೆಸ್ ಟಿಕೆಟ್ ಸಂಬಂಧ ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಪುತ್ರಿ ಸಂಯುಕ್ತಾ ಪಾಟೀಲ್ ಮತ್ತು ವೀಣಾ ಕಾಶಪ್ಪನವರ್ ನಡುವೆ ಪೈಪೋಟಿ ಇತ್ತು. ಅಂತಿಮವಾಗಿ ಟಿಕೆಟ್ ಸಂಯುಕ್ತಾ ಪಾಟೀಲ್ ಪಾಲಾಗಿದೆ. ಟಿಕೆಟ್ ಕೈತಪ್ಪಿದ್ದರಿಂದ ಬೇಸರಗೊಂಡ ವೀಣಾ ಅವರು ನವದೆಹಲಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಮನೆ ಎದುರು ಕಣ್ಣೀರು ಸುರಿಸಿದ್ದಾರೆ.
"ನನಗೆ ಟಿಕೆಟ್ ನೀಡುವಂತೆ ಕಾರ್ಯಕರ್ತರು ಒತ್ತಾಯಿಸುತ್ತಿರುವುದು ನನ್ನ ಜಿಲ್ಲೆಯ ಜನ ನನ್ನ ಮೇಲಿಟ್ಟಿರುವ, ಪ್ರೀತಿ, ಅಭಿಮಾನ ಎಂದು ಭಾವಿಸುತ್ತೇನೆ. ನನಗಿರುವುದೇ ಇದು ಕೊನೆ ಒಂದು ಅವಕಾಶ. ನನ್ನ ಜಿಲ್ಲೆಯ ಜನರು ನನ್ನನ್ನು ಕಳೆದುಕೊಳ್ಳಲು ಬಯಸುವುದಿಲ್ಲ. ಜಿಲ್ಲೆಯಲ್ಲಿ ಸೇವೆ ಸಲ್ಲಿಸಲು ಇದೊಂದು ಕೊನೆಯ ಅವಕಾಶ. ಇದನ್ನು ಇವರು ಈ ರೀತಿ ಮಾಡಿದ್ದಾರೆ ಅಂದರೆ ಒಬ್ಬ ಹೆಣ್ಣು ಮಗಳಿಗೆ ಅನ್ಯಾಯ ಮಾಡಿದ ಹಾಗೆ" ಎಂದು ಹೇಳಿ ಕಣ್ಣೀರು ಹಾಕಿದ್ದಾರೆ.
ಅದಲ್ಲದೆ ಬಾಗಲಕೋಟೆಯಲ್ಲಿ ಅವರ ಬೆಂಬಲಿಗರು ರಸ್ತೆಗಿಳಿದು ಪ್ರತಿಭಟನೆ ಮಾಡಿದ್ದಾರೆ. ಟಿಕೆಟ್ ಕೈತಪ್ಪಿದ ಬಳಿಕ ಮಾತನಾಡಿದ ವೀಣಾ ಅವರು, ಗೆಲ್ಲುವ ವೇಳೆ ಕಾಂಗ್ರೆಸ್ ಪಕ್ಷಕ್ಕೆ ನನ್ನ ಅವಶ್ಯಕತೆಯಿಲ್ಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.