Select Your Language

Notifications

webdunia
webdunia
webdunia
webdunia

ಅನುಪಮಾ ಶೆಣೈ ರಾಜೀನಾಮೆಗೆ ಲಿಕ್ಕರ್ ಲಾಬಿ ಕಾರಣವೇ?

ಅನುಪಮಾ ಶೆಣೈ
ಬೆಂಗಳೂರು , ಭಾನುವಾರ, 5 ಜೂನ್ 2016 (15:01 IST)
ಅನುಪಮಾ ಶೆಣೈ ರಾಜೀನಾಮೆಗೆ ಲಿಕ್ಕರ್ ಲಾಬಿ ಕಾರಣವೇ? ಹೌದು ಎಂದಾದರೆ, ಸಿದ್ದರಾಮಯ್ಯನವರ ಕಾಂಗ್ರೆಸ್ ನೇತೃತ್ವದ ಸರಕಾರದಲ್ಲಿ ದಕ್ಷ, ಪ್ರಾಮಾಣಿಕ ಅಧಿಕಾರಿಗಳು ಕಾರ್ಯ ನಿರ್ವಹಿಸಲು ಸಾಧ್ಯವಿಲ್ಲ ಎಂದೇ ಅರ್ಥ. 

ದಕ್ಷ, ಪ್ರಾಮಾಣಿಕ, ಕೆಚ್ಚೆದೆಯ ಅಧಿಕಾರಿ ಎಂದೇ ಖ್ಯಾತಿಯಾಗಿರುವ ಅನುಪಮಾ ಶೆಣೈ ಅವರು ಶನಿವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರ ಬಂದಿದ್ದಾರೆ. ಆದರೆ, ಅವರ ರಾಜೀನಾಮೆಗೆ ಸ್ಪಷ್ಟ ಕಾರಣವೇನು ಎನ್ನುವುದು ಇನ್ನೂ ತಿಳಿದು ಬಂದಿಲ್ಲ. ಇವುಗಳ ನಡುವೆಯೇ ಅವರದೆನ್ನಲಾದ ಫೇಸ್‌ಬುಕ್ ಖಾತೆಯಲ್ಲಿ `ಲಿಕ್ಕರ್ ಲಾಬಿಗೆ ಕೂಡ್ಲಗಿ ಜನತೆ ಶರಣು ಶರಣು ಎನ್ನಿರೇ' ಎನ್ನುವ ಸ್ಟೇಟಸ್ ಹರಿದಾಡುತ್ತಿದ್ದು ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಅಲ್ಲದೇ, `ಸಿದ್ದರಾಮಯ್ಯರ 'ರಮ್' ರಾಜ್ಯ- ಎಂದು ವ್ಯಕ್ತಿಯೊಬ್ಬರು ಹಾಕಿರುವ ಪೋಸ್ಟನ್ನು, ಅನುಪಮಾ ಅವರು ತಮ್ಮ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
 
ಜೊತೆಗೆ, ಕೇವಲ ಒಂದು ಗಂಟೆ ಹಿಂದಷ್ಟೇ (1.20ಕ್ಕೆ) ಅನುಪಮಾ ಅವರು ತಮ್ಮ ಪ್ರೊಫೈಲ್ ಫೋಟೋ ಬದಲಿಸಿ, ಕ್ರಾಂತಿಕಾರಿ ಸಂದೇಶ(ಅನ್ಯಾಯ ಅನ್ನೋದು ಕಾನೂನಾದಾಗ ಬಂಡಾಯ ಅನ್ನೋದು ಕರ್ತವ್ಯವಾಗುತ್ತದೆ )ವಿರುವ ಸ್ಲೋಗನ್ ಹಾಕಿದ್ದಾರೆ. 
ಕ್ಷಣಕ್ಷಣಕ್ಕೂ ಅವರ ರಾಜೀನಾಮೆ ಪ್ರಕರಣ ಹೊಸತೊಂದು ಕುತೂಹಲಕ್ಕೆ ಎಡೆಮಾಡಿಕೊಡುತ್ತಿವೆಯಲ್ಲದೆ, ಅದರ ಹಿನ್ನೆಲೆಯಲ್ಲಿ ನಿಜವಾಗಿಯೂ ಲಿಕ್ಕರ್ ಲಾಬಿಯ ಕೈವಾಡವಿದೆಯೇ ಎಂಬ ಪ್ರಶ್ನೆ ಜನತೆಯನ್ನು ಕಾಡುತ್ತಿದೆ. ಸಂಬಂಧಿಸಿ ಪ್ರತಿಪಕ್ಷದ ನಾಯಕ ಜಗದೀಶ ಶೆಟ್ಟರ್ ಹುಬ್ಬಳ್ಳಿಯಲ್ಲಿ, ಸಿದ್ದರಾಮಯ್ಯನವರ ಸರಕಾರ ಭ್ರಷ್ಟತೆಯಿಂದ ಕೂಡಿದ್ದು, ದಕ್ಷ, ಪ್ರಾಮಾಣಿಕ ಅಧಿಕಾರಿಗಳಿಗೆ ಕರ್ತವ್ಯ ನಿರ್ವಹಿಸಲು ಅವಕಾಶವೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
 
ಸರಕಾರಿ ಅಧಿಕಾರಿಯೊಬ್ಬರ ಆಕಸ್ಮಿಕ ರಾಜೀನಾಮೆ ಮತ್ತು ಸಾಮಾಜಿಕ ಜಾಲತಾಣದಲ್ಲಿ ಅವರು ಹಂಚಿಕೊಂಡಿದ್ದಾರೆನ್ನಲಾದ ಪೋಸ್ಟಿಂಗ್ ಸದ್ಯಕ್ಕೆ ಚರ್ಚೆಯ ವಿಷಯವಾಗಿದೆ.

* ಅವರು ಹಂಚಿಕೊಂಡಿರುವ ಪೋಸ್ಟ್ ಹೀಗಿದೆ: 
"ಇದು ನಡೆದಿರುವ ಘಟನೆ.
ಸಿದ್ದರಾಮಯ್ಯರ 'ರಮ್' ರಾಜ್ಯ.
ಅಂಬೇಡ್ಕರ್ ಭವನದ ರಸ್ತೆ ರಕ್ಷಣೆಗೆ ನಿಂತ ದಕ್ಷ ಅಧಿಕಾರಿ ಅನುಪಮಾ ಶೆಣೈಯವರಿಗೆ  ಕಿರುಕುಳ ಭಾಗ್ಯ  
ಬಾಯಿಬಿಟ್ಟರೆ ದಲಿತರ ಉದ್ಧಾರ ಮಾಡ್ತೇವೆ ಹೇಳಿದ ಸಿದ್ದು ಸರಕಾರದಿಂದ ಇದೇನಿದು ದ್ವಂದ್ವ ನೀತಿ...
ಅಂಬೇಡ್ಕರ್ ಭವನದ ಪಕ್ಕದಲ್ಲಿಯೇ ಇರುವ ಮಧ್ಯದಂಗಡಿ ಅದರ ಪಕ್ಕದ ರಸ್ತೆ ಕಾಂಗ್ರೆಸ್ ಗೂಂಡಾಗಳಿಂದಲೇ ವತ್ತುವರಿ. ದಲಿತರ ಕಂಪ್ಲೇಂಟ್ ಆಧಾರದಲ್ಲಿ ಅದನ್ನು ಪ್ರಶ್ನಿಸಿದರು ಅನುಪಮಾ ಶೆಣೈ ಅಷ್ಟಕ್ಕೇ ಅವರ ವಿರುದ್ಧವಾಗಿ ಪ್ರತಿಭಟನೆಗಳು ನಡೆದವು. ಅವರಿಗೆ ಸಾಲು ಸಾಲು ಒತ್ತಡ ತರುವ ಪ್ರಯತ್ನವೂ ನಡೆದವು, ಕಿರುಕುಳವನ್ನೂ ನೀಡಲಾಯಿತು, ಇದರಿಂದ ಮನನೊಂದ ಅನುಪಮಾ ಶೆಣೈ ರಾಜೀನಾಮೆ ಕೊಡಬೇಕಾದ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದರು..."
ನ್ಯಾಯ ಎಲ್ಲಿದೆ ????*
 
ಅನುಪಮಾ ಅವರು ಶನಿವಾರ ಮುಂಜಾನೆ ಇನಸ್ಪೆಕ್ಟರ್ ನಾಗಪ್ಪ ಅವರ ಬಳಿ ರಾಜೀನಾಮೆ ಪತ್ರ ನೀಡಿ, ಹಿರಿಯ ಅಧಿಕಾರಿಗಳಿಗೆ ತಲುಪಿಸಿ ಎಂದು ಹೇಳಿ ಕಚೇರಿಯಿಂದ ಮರಳಿದ್ದಾರೆ. ಇದನ್ನು ಎಸ್‌ಪಿ ಆರ್. ಚೇತನ್ ಸ್ಪಷ್ಟೀಕರಿಸಿದ್ದು, ಬಳಿಕ ಅನುಪಮಾ ಅವರು ಎಲ್ಲಿ ತೆರಳಿದ್ದಾರೆ ಎನ್ನುವುದು ತಿಳಿದು ಬಂದಿಲ್ಲ. ಈವರೆಗೂ ಅವರು ಯಾರ ಸಂಪರ್ಕಕ್ಕೂ ದೊರೆತಿಲ್ಲ. ಆದರೆ, ಅವರದ್ದೆನ್ನಲಾದ ಫೇಸಬುಕ್ ಖಾತೆಯಲ್ಲಿ ಮಾತ್ರ ಪೋಸ್ಟ್ ಹಂಚಿಕೆ, ಪ್ರೊಫೈಲ್ ಬದಲಾವಣೆಯಾಗುತ್ತಿದೆ. ಅವರ ರಾಜೀನಾಮೆ ಪತ್ರ ಪರಿಶೀಲಿಸಿದ ಬಳಿಕ ಮುಂದಿನ ಕ್ರಮ ತೆಗೆದುಕೊಳ್ಳುವುದಾಗಿ ಎಸ್‌ಪಿ ಚೇತನ್ ತಿಳಿಸಿದ್ದಾರೆ.
 
ಉಡುಪಿ ತಾಲ್ಲೂಕಿನ ಉಚ್ಚಿಲ ಗ್ರಾಮದಲ್ಲಿರುವ ಅವರ ಮನೆಗೆ ರಾತ್ರೋ ರಾತ್ರಿ ಬೀಗ ಹಾಕಲಾಗಿದೆ. ತಮ್ಮ ಮಗಳು ರಾಜೀನಾಮೆ ನೀಡಿರುವ ಕುರಿತು ಯಾವ ಮಾಹಿತಿಯೂ ಇಲ್ಲ. ಅವಳ ಜೊತೆ ಮಾತನಾಡಿ ಬಳಿಕವೇ ಸತ್ಯ ಏನೆಂದು ಖಚಿತವಾಗಲಿದೆ' ಎಂದು ಅವರ ತಂತೆ ರಾಧಾಕೃಷ್ಣ ಶೆಣೈ ತಮ್ಮ ಸ್ನೇಹಿತರಲ್ಲಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ಅಕ್ರಮ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅನುಪಮಾ ಅವರು ಕೂಡ್ಲಗಿಯ ಮೂವರು ವ್ಯಕ್ತಿಗಳನ್ನು ಬಂಧಿಸಿದ್ದರು. ಬಂಧನದ ನಂತರ ಠಾಣೆಯ ಎದುರು ನೂರಾರು ಜನರು ಪ್ರತಿಭಟನೆ ನಡೆಸಿ, ಅನುಪಮಾ ಅವರನ್ನು ಸೇವೆಯಿಂದ ಅಮಾನತುಗೊಳಿಸಬೇಕೆಂದು ಒತ್ತಾಯಿಸಿದ್ದರು. ಇದರಿಂದ ಅವರು ಮನನೊಂದು ರಾಜೀನಾಮೆ ನೀಡಿದ್ದಾರೆ ಎನ್ನುವ ಮಾತುಗಳು ಸಹ ಅಲ್ಲಲ್ಲಿ ಕೇಳಿಬರುತ್ತಿವೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮಾಂಸದೂಟ ಸೇವಿಸಿ 70 ಜನರು ಅಸ್ವಸ್ಥ