ಬೆಂಗಳೂರು: ದಸರಾ ಹಬ್ಬ ನೆಪದಲ್ಲಿ ಕೆಎಸ್ಆರ್ ಟಿಸಿ ಮತ್ತು ಖಾಸಗಿ ಬಸ್ ದರ ಗಗನಕ್ಕೇರಿದೆ. ಊರಿಗೆ ತೆರಳುವವರಿಗೆ ಟಿಕೆಟ್ ಸಿಗುತ್ತಿಲ್ಲ, ಸಿಕ್ಕರೂ ಟಿಕೆಟ್ ದರ ಕೇಳಿದರೇ ಶಾಕ್ ಆಗುವಂತಿದೆ.
ಬೆಂಗಳೂರಿನಿಂದ ದಸರಾ ಹಬ್ಬದ ನಿಮಿತ್ತ ಇಂದಿನಿಂದ ತಮ್ಮ ತಮ್ಮ ಊರುಗಳಿಗೆ ತೆರಳುವವರ ಸಂಖ್ಯೆ ಹೆಚ್ಚಾಗಲಿದೆ. ನಗರದಲ್ಲಿ ಇಂದಿನಿಂದ ಟ್ರಾಫಿಕ್ ಜಾಮ್ ಕೂಡಾ ಮಿತಿ ಮೀರುವ ಸಾಧ್ಯತೆಯಿದೆ. ಇದರ ನಡುವೆ ಟಿಕೆಟ್ ದರವೂ ದುಬಾರಿಯಾಗಿದೆ.
ಕೆಎಸ್ಆರ್ ಟಿಸಿ ಟಿಕೆಟ್ ದರ ದೂರ ಪ್ರಯಾಣಕ್ಕೆ 100 ರಿಂದ 200 ರೂ. ಏರಿಕೆ ಮಾಡಲಾಗಿದೆ. ಬೆಂಗಳೂರಿನಿಂದ ಮೈಸೂರಿನಗೆ 20 ರೂ.ಗಳಷ್ಟು ಏರಿಕೆ ಮಾಡಲಾಗಿದೆ. ಬೆಂಗಳೂರಿನಿಂದ ಮಂಗಳೂರಿಗೆ ವಿಶೇಷ ಬಸ್ ಗಳನ್ನು ಹಾಕಲಾಗಿದ್ದು ಬೆಲೆ ಮಾತ್ರ 1500 ರೂ.ವರೆಗೆ ತಲುಪಿದೆ.
ಇನ್ನು, ಖಾಸಗಿ ಬಸ್ ಗಳದ್ದೂ ಇದೇ ಕತೆ. ಬೆಂಗಳೂರಿನಿಂದ ಬೆಳಗಾವಿಗೆ ಈ ಮೊದಲು 1200 ರೂ.ಗಳಿತ್ತು. ಆದರೆ ಈಗ 2500 ರೂ.ವರೆಗೆ ತಲುಪಿದೆ. ಬೆಂಗಳೂರಿನಿಂದ ಮಂಗಳೂರಿಗೆ ಈ ಮೊದಲು 1200 ರೂ.ಗಳಿತ್ತು. ಆದರೆ ಈಗ 1600 ರೂ.ಗಳಿಂದ 1800 ರೂ.ವರೆಗೆ ತಲುಪಿದೆ.