Publish Date: Thu, 11 Apr 2024 (14:01 IST)
Updated Date: Thu, 11 Apr 2024 (14:04 IST)
ಶಿವಮೊಗ್ಗ: ಲೋಕಸಭೆ ಚುನಾವಣೆಯಲ್ಲಿ ಯಡಿಯೂರಪ್ಪ ಆಂಡ್ ಸನ್ಸ್ ವಿರುದ್ಧ ತೊಡೆತಟ್ಟಿರುವ ಹಿರಿಯ ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪ ಶಿವಮೊಗ್ಗದಿಂದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ.
ಆದರೆ ಈಶ್ವರಪ್ಪ ಪ್ರಚಾರಕ್ಕೆ ಮೋದಿ ಫೋಟೋ ಬಳಸುವುದು ರಾಜ್ಯ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ. ಇದಕ್ಕಾಗಿ ಚುನಾವಣಾ ಆಯೋಗದ ಮೊರೆ ಹೋಗಿರುವ ಯಡಿಯೂರಪ್ಪ ಬಣ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಈಶ್ವರಪ್ಪ ಮೋದಿ ಫೋಟೋ ಬಳಸಬಾರದು ಎಂದು ತಗಾದೆ ತೆಗೆದಿದೆ.
ಇದೀಗ ಇದಕ್ಕೆ ತಿರುಗೇಟು ನೀಡಿರುವ ಕೆಎಸ್ ಈಶ್ವರಪ್ಪ, ಹಾಗಿದ್ದರೆ ಶಿವಮೊಗ್ಗದಲ್ಲಿ ಯಡಿಯೂರಪ್ಪ ಮೋದಿ ಫೋಟೋ ಬಳಸದೇ ಮಗನನ್ನು ಗೆಲ್ಲಿಸಿಕೊಂಡು ಬರಲಿ ನೋಡೋಣ ಎಂದು ಸವಾಲು ಹಾಕಿದ್ದಾರೆ. ಎಡಭಾಗದಲ್ಲಿ ವಿಜಯೇಂದ್ರ, ಇನ್ನೊಂದು ಕಡೆ ಯಡಿಯೂರಪ್ಪ ಫೋಟೋ ಬಳಸಿ ಮಗನನ್ನು ಗೆಲ್ಲಿಸಲಿ ಎಂದಿದ್ದಾರೆ.
ಮೋದಿ ಫೋಟೋ ಬಳಸದಂತೆ ತಡೆಯಲು ಅವರು ಯಾರು? ಮೋದಿ ವಿಶ್ವ ನಾಯಕ. ಅವರನ್ನು ಹೃದಯದಲ್ಲಿಟ್ಟುಕೊಂಡು ಆರಾಧಿಸುತ್ತೇನೆ. ನನ್ನನ್ನು ಯಾರೂ ತಡೆಯಲಾಗದು ಎಂದು ಈಶ್ವರಪ್ಪ ಆಕ್ರೋಶ ಹೊರಹಾಕಿದ್ದಾರೆ.