ಬೆಂಗಳೂರು: ಕೋಗಿಲು ಲೇಔಟ್ ನಲ್ಲಿ ತೆರವುಗೊಳಿಸಲಾಗಿರುವ ಎಲ್ಲರಿಗೂ ಮನೆ ಕೊಡಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಶಾಕಿಂಗ್ ಹೇಳಿಕೆ ನೀಡಿದ್ದಾರೆ.
ಕೋಗಿಲು ಲೇಔಟ್ ನಲ್ಲಿ ಮುಸ್ಲಿಮರೇ ಇರುವ ಕಾರಣ ವೋಟ್ ಬ್ಯಾಂಕ್ ಕಾರಣಕ್ಕೆ ಕಾಂಗ್ರೆಸ್ ಸರ್ಕಾರ ಅಕ್ರಮವಾಗಿ ನೆಲೆಸಿರುವವರಿಗೂ ತಾವೇ ಸೂರು ಕಲ್ಪಿಸಿಕೊಡುತ್ತಿದೆ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಸಾರ್ವಜನಿಕರೂ ಸರ್ಕಾರದ ಕ್ರಮಕ್ಕೆ ಭಾರೀ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇದರ ನಡುವೆ ಡಿಕೆ ಶಿವಕುಮಾರ್ ಎಲ್ಲರಿಗೂ ಮನೆ ಕೊಡುತ್ತಿಲ್ಲ ಎಂದಿದ್ದಾರೆ. ಓಲೈಕೆ ರಾಜಕಾರಣ ಮಾಡುವ ಪ್ರಶ್ನೆಯೇ ಇಲ್ಲ. ಯಾರು ಸರಿಯಾದ ದಾಖಲೆ ಹೊಂದಿದ್ದಾರೋ, ಬಡವರಿದ್ದಾರೆ ಅವರಿಗೆ ಮಾತ್ರ ಕೊಡುತ್ತೀವಿ. ದಾಖಲೆ ಸರಿ ಇಲ್ಲದವರಿಗೆಲ್ಲಾ ಕೊಡಲ್ಲ ಎಂದಿದ್ದಾರೆ.
ಇತ್ತ ವಸತಿ ಸಚಿವ ಜಮೀರ್ ಅಹ್ಮದ್ ಕೂಡಾ ಇದೇ ಮಾತು ಹೇಳಿದ್ದಾರೆ. ಎಲ್ಲರಿಗೂ ನಾವು ಮನೆ ಕಟ್ಟಿಸಿಕೊಡುತ್ತಿಲ್ಲ. ಯಾರು ಅರ್ಹರಿದ್ದಾರೆ ಅವರಿಗೆ ಮಾತ್ರ ಮನೆ ಕೊಡುತ್ತಿದ್ದೇವೆ ಎಂದಿದ್ದಾರೆ. ಆ ಮೂಲಕ ಸಾರ್ವಜನಿಕವಾಗಿ ಸರ್ಕಾರದ ವಿರುದ್ಧ ಕೇಳಿಬರುತ್ತಿರುವ ಆಕ್ರೋಶ ತಣ್ಣಗಾಗಿಸಲು ಯತ್ನಿಸಿದ್ದಾರೆ.