Publish Date: Thu, 03 Sep 2026 (17:24 IST)
Updated Date: Thu, 03 Sep 2026 (17:27 IST)
ಬೆಂಗಳೂರು: ರಾಜಧಾನಿ ಬೆಂಗಳೂರಿನ ಐತಿಹಾಸಿಕ ಲಾಲ್ ಬಾಗ್, ಕಬ್ಬನ್ ಪಾರ್ಕ್ ಸೇರಿದಂತೆ ರಾಜ್ಯದ ಪ್ರಮುಖ ಉದ್ಯಾನವನಗಳ ಭೂಮಿಯನ್ನು ಸಾರ್ವಜನಿಕ ಮೂಲಸೌಕರ್ಯ ಯೋಜನೆಗಳಿಗೆ ಬಳಸಿಕೊಳ್ಳಲು ಹಾದಿ ಮಾಡಿಕೊಡುತ್ತಿದ್ದ ವಿವಾದಾತ್ಮಕ 'ಕರ್ನಾಟಕ ಸರ್ಕಾರಿ ಉದ್ಯಾನವನಗಳ (ಸಂರಕ್ಷಣೆ) (ತಿದ್ದುಪಡಿ) ವಿಧೇಯಕ-2026' ಅನ್ನು ಹಿಂಪಡೆಯಲು ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ನಿರ್ಧರಿಸಿದೆ. ಸಾರ್ವಜನಿಕರು, ಪರಿಸರ ಪ್ರೇಮಿಗಳು ಹಾಗೂ ಪ್ರತಿಪಕ್ಷಗಳ ತೀವ್ರ ಆಕ್ರೋಶದ ಹಿನ್ನೆಲೆಯಲ್ಲಿ ಸರ್ಕಾರ ಈ ಮಹತ್ವದ ನಿರ್ಧಾರ ಕೈಗೊಂಡಿದೆ.
ಏನಿದು ವಿವಾದಾತ್ಮಕ ತಿದ್ದುಪಡಿ ವಿಧೇಯಕ?
ಇತ್ತೀಚೆಗೆ ನಡೆದ ವಿಧಾನಮಂಡಲ ಅಧಿವೇಶನದಲ್ಲಿ ಚರ್ಚೆಯಿಲ್ಲದೆ ಅಂಗೀಕರಿಸಲ್ಪಟ್ಟ ಈ ವಿಧೇಯಕವು, ಸಾರ್ವಜನಿಕ ಯೋಜನೆಗಳಾದ ಸುರಂಗ ರಸ್ತೆ, ಮೆಟ್ರೋ ಮತ್ತು ರಸ್ತೆ ಅಗಲೀಕರಣಕ್ಕಾಗಿ ಶೇಕಡಾ 5 ರಷ್ಟು ಉದ್ಯಾನವನದ ಜಾಗವನ್ನು ಬಳಕೆ ಮಾಡಿಕೊಳ್ಳಲು ಅಥವಾ ಮಾರಾಟ, ಗುತ್ತಿಗೆ, ಭೋಗ್ಯಕ್ಕೆ ನೀಡಲು ಸರ್ಕಾರಕ್ಕೆ ಅಧಿಕಾರ ನೀಡುತ್ತಿತ್ತು. ಹೆಬ್ಬಾಳದಿಂದ ಸಿಲ್ಕ್ ಬೋರ್ಡ್ವರೆಗೆ ನಿರ್ಮಿಸಲು ಉದ್ದೇಶಿಸಿರುವ 17 ಕಿ.ಮೀ ಸುರಂಗ ರಸ್ತೆ ಯೋಜನೆಗಾಗಿ ಲಾಲ್ ಬಾಗ್ನ ಜಾಗವನ್ನು ಬಳಸಿಕೊಳ್ಳಲು ಸರ್ಕಾರ ಈ ತಿದ್ದುಪಡಿ ತಂದಿತ್ತು ಎನ್ನಲಾಗಿದೆ.
ಪರಿಸರ ಪ್ರೇಮಿಗಳು ಮತ್ತು ಪ್ರತಿಪಕ್ಷಗಳ ಭಾರಿ ಪ್ರತಿಭಟನೆ:
ಈ ಕಾಯ್ದೆ ಜಾರಿಗೆ ಬಂದರೆ ಬೆಂಗಳೂರಿನ ಉಳಿದಿರುವ ಹಸಿರು ವಲಯ ಸಂಪೂರ್ಣ ನಾಶವಾಗಲಿದೆ ಎಂದು ವಾಸಿ ಕ್ಷೇಮಾಭಿವೃದ್ಧಿ ಸಂಘಗಳು, ವಾಕರ್ಸ್ ಅಸೋಸಿಯೇಷನ್ ಹಾಗೂ ಸಾವಿರಾರು ನಾಗರಿಕರು ಬೀದಿಗಿಳಿದು 'ವಾಕ್ ಇನ್ ಲಾಲ್ ಬಾಗ್' ಪ್ರತಿಭಟನೆ ನಡೆಸಿದ್ದರು. ಲಾಲ್ ಬಾಗ್ನ ಸುಮಾರು 3 ಶತಕೋಟಿ ವರ್ಷ ಹಳೆಯದಾದ 'ಪೆನಿನ್ಸುಲರ್ ಗ್ನೈಸ್' ಶಿಲೆಗೆ ಅಪಾಯ ಕಾಯಲಿದೆ ಎಂದು ಪರಿಸರವಾದಿಗಳು ಎಚ್ಚರಿಸಿದ್ದರು. ಇದರ ಜೊತೆಗೆ ಬಿಜೆಪಿ ಮತ್ತು ಜೆಡಿಎಸ್ ನಾಯಕರು ವಿಧೇಯಕಕ್ಕೆ ಅಂಕಿತ ಹಾಕದಂತೆ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದರು.
ಸಾರ್ವಜನಿಕ ವಲಯದಲ್ಲಿ ಭಾರಿ ಜನಾಕ್ರೋಶ ವ್ಯಕ್ತವಾಗುತ್ತಿದ್ದಂತೆ ಸರ್ಕಾರ, ಸುಗ್ರೀವಾಜ್ಞೆಯ ಮೂಲಕ ಈ ವಿಧೇಯಕವನ್ನು ಅಧಿಕೃತವಾಗಿ ವಾಪಸ್ ಪಡೆಯಲು ತೀರ್ಮಾನಿಸಿದೆ. ಸಾರ್ವಜನಿಕರ ಹಿತಾಸಕ್ತಿ ಮತ್ತು ಉದ್ಯಾನವನಗಳ ರಕ್ಷಣೆ ನಮಗೆ ಮುಖ್ಯವಾಗಿದ್ದು, ವಿಧೇಯಕವನ್ನು ಹಿಂಪಡೆದು ಮರುಪರಿಶೀಲಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಜನರ ಒಗ್ಗಟ್ಟು ಮತ್ತು ಪ್ರತಿಭಟನೆಯ ಫಲವಾಗಿ ಬೆಂಗಳೂರಿನ ಶ್ವಾಸಕೋಶದಂತಿರುವ ಹಸಿರು ಉದ್ಯಾನವನಗಳು ಸದ್ಯಕ್ಕೆ ರಕ್ಷಿಸಲ್ಪಟ್ಟಿದ್ದು, ಸರ್ಕಾರದ ನಿರ್ಧಾರವನ್ನು ಸಾರ್ವಜನಿಕರು ಹಾಗೂ ಪರಿಸರ ಪ್ರೇಮಿಗಳು ಸ್ವಾಗತಿಸಿದ್ದಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ