ಬೆಳ್ತಂಗಡಿ: ಸತತ ಬಿಸಿಲ ಬೇಗೆಯಿಂದ ಸುಸ್ತಾಗಿದ್ದ ಕರಾವಳಿ ಮಂದಿಗೆ ಇಂದು ವರುಣ ತಂಪೆರೆದಿದ್ದಾನೆ. ಮಧ್ಯಾಹ್ನದ ವೇಳೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಸಿಲ ಧಗೆ ವಿಪರೀತವಿತ್ತು. ಮಳೆಯ ಲೆಕ್ಕಚಾರವನ್ನು ಹಾಕಿಕೊಂಡಿದ್ದ ಮಂದಿಗೆ ವರುಣ ಸತತ ಒಂದು ಗಂಟೆಗಳ ಕಾಲ ಸುರಿದಿದ್ದಾನೆ.
ಇದರಿಂದ ಬಿಸಿಲ ತಾಪದಿಂದ ಕಂಗೆಟ್ಟಿದ್ದ ಜನತೆಗೆ ಸ್ವಲ್ಪ ಮಟ್ಟಿಗೆ ರಿಲ್ಯಾಕ್ಸ್ ಆಗಿದೆ. ವಿಶೇಷತೆ ಏನೆಂದರೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನಲ್ಲಿ ಗುಡುಗು, ಸಿಡಿಲು ಇಲ್ಲದೆ ಒಂದು ಗಂಟೆಗಳ ಕಾಲ ಮಳೆಯಾಗಿದೆ.
ಮರಾಠವಾಡದಿಂದ ಮನ್ನಾರ್ ಕೊಲ್ಲಿ ತನಕ ವಾಯಭಾರ ಕುಸಿತ ಉಂಟಾಗಿರುವ ಕಾರಣ, ಕರ್ನಾಟಕ ಮತ್ತು ತಮಿಳುನಾಡಿನಾದ್ಯಂತ ಒಳನಾಡು ಪ್ರದೇಶಗಳಲ್ಲಿ ಅಲ್ಲಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಮುನ್ಸೂಚನೆಯಿತ್ತು.
ಕೆಲವು ಕಡೆ ಮಧ್ಯಮ ಪ್ರಮಾಣದ ಮಳೆಯಾಗುವ ಸಾಧ್ಯತೆ ಇದೆ. ಕೆಲವು ಕಡೆ ಅಲ್ಲಲ್ಲಿ ಗುಡುಗು ಮಿಂಚು, ಸಿಡಿಲು, ಗಾಳಿ ಸಹಿತ ಮಳೆಯಾಗುವ ಮುನ್ಸೂಚನೆಯಿತ್ತು.
ಕರ್ನಾಟಕದಲ್ಲಿ ವಿಶೇಷವಾಗಿ ಬೆಂಗಳೂರು ಸೇರಿ ಅಲ್ಲಲ್ಲಿ ಗುಡುಗು ಸಹಿತ ಹಗುರ ಮಳೆ ಸಾಧ್ಯತೆ, ಕರಾವಳಿಯಲ್ಲಿ ಮಳೆ ತುಸು ಹೆಚ್ಚು ಇರಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ತಿಳಿಸಿದೆ.