Publish Date: Tue, 19 May 2026 (09:12 IST)
Updated Date: Tue, 19 May 2026 (09:15 IST)
ಕೊಡಗು: ದುಬಾರೆ ಆನೆ ಶಿಬಿರದಲ್ಲಿ ನಿನ್ನೆ ಆನೆಗಳ ಕಾದಾಟದ ನಡುವೆ ಸಿಲುಕಿ ತಮಿಳುನಾಡು ಮೂಲದ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಕಾದಾಟವಾಡಿದ ಕಂಜನ್ ಆನೆ ಪುಂಡಾಟ ಮೆರೆಯುತ್ತಿರುವುದು ಇದೇ ಮೊದಲಲ್ಲ.
ದಸರಾದಲ್ಲಿ ಬಳಕೆಯಾಗುವ ಆನೆಗಳ ಪೈಕಿ ಕಂಜನ್ ಆನೆಯೂ ಒಂದು. ದಸರಾ ಮುಗಿದೊಡನೆ ಈ ಆನೆಗಳು ದುಬಾರೆ ಆನೆ ಶಿಬಿರಕ್ಕೆ ಮರಳುತ್ತವೆ. ಅದೇ ರೀತಿ ಕಂಜನ್ ಕೂಡಾ ದುಬಾರೆ ಶಿಬಿರದಲ್ಲಿದ್ದಾನೆ. ಮೈಸೂರು ದಸರಾದಲ್ಲಿ ಬಳಕೆಯಾಗುವ ಅತ್ಯಂತ ಎತ್ತರದ ಮತ್ತು ಕಟ್ಟಮಸ್ತಾದ ಆನೆಗಳಲ್ಲಿ ಕಂಜನ್ ಕೂಡಾ ಒಂದು.
2014 ರಲ್ಲಿ ಹಾಸನ ಜಿಲ್ಲೆಯಲ್ಲಿ ಪುಂಡಾನೆಯಾಗಿದ್ದಾಗ ಸೆರೆ ಹಿಡಿಯಲಾಗಿತ್ತು. ಬಳಿಕ ಅದನ್ನು ದುಬಾರೆ ಶಿಬಿರದಲ್ಲಿ ಪಳಗಿಸಲಾಗಿತ್ತು. ಕಳೆದ ಬಾರಿ ದಸರಾದಲ್ಲೂ ಕಂಜನ್ ಭಾಗಿಯಾಗಿದ್ದ. ಆದರೆ ದಸರಾ ಸಂದರ್ಭದಲ್ಲಿಯೇ ಕಂಜನ್ ಸುದ್ದಿಯಾಗಿದ್ದ.
ಮೈಸೂರು ಅರಮನೆಯಲ್ಲಿ ಕಂಜನ್ ಇನ್ನೊಂದು ಆನೆ ಧನಂಜಯನ ಜೊತೆ ಕಾದಾಟವಾಡಿದ್ದ. ಮದ ಏರಿ ಮೈಸೂರು ಅರಮನೆ ಆವರಣ ಬಿಟ್ಟು ಎರಡೂ ಆನೆಗಳೂ ಕಾದಾಡುತ್ತಾ ಬೀದಿಗೆ ಬಂದಿದ್ದವು. ಕೊನೆಗೆ ಮಾವುತ ಅದನ್ನು ನಿಯಂತ್ರಿಸಿ ವಾಪಸ್ ಅರಮನೆ ಆವರಣದೊಳಗೆ ಕರೆತಂದಿದ್ದ. ಅದೇ ಕಂಜನ್ ಇದೀಗ ದುಬಾರೆ ಶಿಬಿರದಲ್ಲಿ ಪುಂಡಾಟವಾಡಿದ್ದಾನೆ. ಸಹ ಆನೆಯೊಂದಿಗೆ ಸ್ನಾನ ಮಾಡುವ ವೇಳೆ ಕಾದಾಟವಾಗಿದೆ. ಈ ಇನ್ನೊಂದು ಆನೆಯೊಂದಿಗೆ ಗುದ್ದಾಡುವ ರಭಸಕ್ಕೆ ಎರಡು ಆನೆಗಳ ಕಾಲಡಿಗೆ ಸಿಕ್ಕ ಮಹಿಳೆ ಅಲ್ಲೇ ಪ್ರಾಣ ಕಳೆದುಕೊಂಡಿದ್ದಾಳೆ. ನೀರಿನಲ್ಲಿ ಸಿಲುಕಿದ್ದರಿಂದ ಮಹಿಳೆಗೂ ಬೇಗನೇ ಆನೆಗಳ ಹಠಾತ್ ದಾಳಿಯಿಂದ ರಕ್ಷಿಸಿಕೊಳ್ಳಲಾಗಲಿಲ್ಲ. ಈ ಘಟನೆ ಬಳಿಕ ಎಚ್ಚೆತ್ತುಕೊಂಡ ಅರಣ್ಯ ಇಲಾಖೆ ಈಗ ಕಠಿಣ ನಿಯಮ ಜಾರಿಗೆ ಮುಂದಾಗಿದೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ