Publish Date: Tue, 29 May 2018 (18:37 IST)
Updated Date: Tue, 29 May 2018 (18:38 IST)
ಸಾಲ ಮನ್ನಾ ಮಾಡಲು ಬಿಡುತ್ತಿಲ್ಲ ಕಾಂಗ್ರೆಸ್ ಪಕ್ಷ ಬಿಡುತ್ತಿಲ್ಲ ಎಂದು ಆಡಳಿತ ರೂಢ ಜೆಡಿಎಸ್ ಸರ್ಕಾರದ ಶಾಸಕರೊಬ್ಬರು ಮಿತ್ರ ಪಕ್ಷದ ವಿರುದ್ದವೇ ವಾಗ್ದಾಳಿ ನಡೆಸಿದ್ದಾರೆ.
ಮಂಡ್ಯದ ಶ್ರೀರಂಗಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕ್ಷೇತ್ರದ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ, ಸಾಲ ಮನ್ನಾ ಮಾಡೋದಕ್ಕೆ ಕಾಂಗ್ರೆಸ್ ಪಕ್ಷ ಬಿಡುತ್ತಿಲ್ಲ. ಕಾಂಗ್ರೆಸ್ ನಾಯಕರ ಕಂಡೀಷನ್ ನಿಂದ ಎಚ್ಡಿಕೆ ಮುಜುಗರ ಅನಭವಿಸುಂತಾಗಿದೆ.
ಸಿಎಂ ಆದವರಿಗೆ ಹಲವು ಆಲೋಚನೆಗಳು ಇರುತ್ತವೆ. ಅದಕ್ಕೆ ಹಣಕಾಸು ಖಾತೆ ಸಿಎಂ ಬಳಿಯೇ ಇರಬೇಕು. ಆದರೆ, ಹಣಕಾಸು ಖಾತೆಯನ್ನ ಸಿಎಂಗೆ ಬಿಟ್ಟುಕೊಡುವುದಕ್ಕೆ ಕಾಂಗ್ರೆಸ್ ನಾಯಕರು ಒಪ್ಪುತ್ತಿಲ್ಲ. ಸಾಲ ಮನ್ನಾ ಮಾಡುವುದಕ್ಕೂ ಹಣಕಾಸು ಖಾತೆ ಮುಖ್ಯವಾಗುತ್ತದೆ. ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಜೆಡಿಎಸ್ ಜೊತೆ ಕಾಂಗ್ರೆಸ್ ನಾಯಕರು ಕೈ ಜೋಡಿಸಿದ್ದಾರೆ.
ಇದೀಗ ಹಲವು ಕಂಡೀಷನ್ ಗಳನ್ನು ಹಾಕುತ್ತಿದ್ದಾರೆ. ಖಾತೆ ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್ ನಾಯಕರು ಗೊಂದಲ ಸೃಷ್ಟಿಸಿದ್ದಾರೆ. ಇದರಿಂದ ಸಿಎಂ ಕುಮಾರಸ್ವಾಮಿ ಅವರಿಗೆ ಮುಜುಗರ ಆಗುತ್ತಿದೆ. ಎಚ್ಡಿಕೆ ಯಾವುದೇ ತೀರ್ಮಾನ ತೆಗೆದುಕೊಂಡರೂ ಜೆಡಿಎಸ್ ನ ಎಲ್ಲಾ ಶಾಸಕರು ಬದ್ದರಾಗಿರುತ್ತೇವೆ ಎಂದರು.
ಕುಮಾರಸ್ವಾಮಿ ರೈತಪರವಾಗಿ ಇದ್ದಾರೆ. ಸಾಲ ಮನ್ನಾ ಮಾಡಬೇಕೆಂಬುದು ಮಂಡ್ಯ ಜಿಲ್ಲೆಯ ಎಲ್ಲಾ ಶಾಸಕರ ಒತ್ತಾಯವಾಗಿದೆ ಎಂದಿದ್ದಾರೆ. ಆದರೆ ಸರ್ಕಾರ ರಚನೆ ಆಗಿ ಕೇವಲ ಎರಡು ವಾರ ಕಳೆಯುತ್ತಿದ್ದಂತೆಯೇ ಮಿತ್ರ ಪಕ್ಷದ ವಿರುದ್ದ ಬಹಿರಂಗ ಹೇಳಿಕೆ ಎರಡು ಪಕ್ಷದ ನಾಯಕರ ಹುಬ್ಬೇರುವಂತೆ ಮಾಡಿದೆ.