Publish Date: Sat, 04 Nov 2017 (19:32 IST)
Updated Date: Sat, 04 Nov 2017 (19:41 IST)
ಬೆಂಗಳೂರು: ಗಣಿ ಅಕ್ರಮದ ವಿಷಯವಾಗಿ ಸಿಬಿಐ ಪ್ರಕರಣ ರದ್ದು ಮಾಡಿದ್ದರೂ ಈಗ ಸರ್ಕಾರ ಎಸ್ಐಟಿ ತನಿಖೆಗೆ ಮುಂದಾಗಿರುವುದು ಸ್ವಾಗತಿಸುತ್ತೇನೆ. ಪ್ರಾಕೃತಿಕ ಸಂಪತ್ತು ರಕ್ಷಣೆಗೆ ಇದು ಅಗತ್ಯ ಎಂದು ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಚ್.ಡಿ.ಕುಮಾರಸ್ವಾಮಿ ಇಂಧನ ಖರೀದಿ ಅವ್ಯವಹಾರ ತನಿಖೆಯ ಸದನ ಸಮಿತಿಗೆ ತಮ್ಮ ಅಭಿಪ್ರಾಯವನ್ನು ಕೊಟ್ಟಾಗಿದೆ. ಈಗ ಕೊನೆಯ ಹಂತದಲ್ಲಿ ನ. 7 ರಂದು ಸಭೆಗೆ ಬರಬೇಕು. ಇಲ್ಲವಾದರೆ ಸಮಿತಿ ಯಾವ ಶಿಫಾರಸ್ಸು ಮಾಡಿದೆ. ಸಮಿತಿಯ ಅಂತಿಮ ಅಭಿಪ್ರಾಯ ಏನು ಎಂದು ಅವರಿಗೆ ತಿಳಿಯುವುದಿಲ್ಲ ಎಂದರು.
ನನ್ನ ಹಾಗೂ ಆಪ್ತರ ಮೇಲೆ ಐಟಿ ದಾಳಿ ಆಗುತ್ತಿರುವುದು ನಿಜ. ಕಾನೂನಿಗೆ ತಲೆಬಾಗಿ ಐಟಿ ತನಿಖೆಗೆ ಸಹಕರಿಸಿದ್ದೇನೆ. ಅವರು ಕರೆದಾಗಲೆಲ್ಲಾ ಹೋಗಿ ಮಾಹಿತಿ ನೀಡಿದ್ದೇನೆ. ಮುಂದಿನ ವಾರ ವಿಚಾರಣೆಗೆ ಕರೆದಿದ್ದು, ಹೋಗುತ್ತೇನೆ. ಕಾನೂನಿನ ವಿಷಯದಲ್ಲಿ ರಾಜಕೀಯ ಬೆರೆಸಬಾರದು ಎಂದು ಮೌನವಾಗಿದ್ದೇನೆ. ಒಂದೆರಡು ದಿನಗಳಾಗಲಿ. ನಂತರ ಎಲ್ಲವೂ ಬಹಿರಂಗವಾಗುತ್ತದೆ ಎಂದರು.