Publish Date: Sat, 30 Aug 2025 (15:26 IST)
Updated Date: Sat, 30 Aug 2025 (15:28 IST)
ಮೈಸೂರು: ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರು ಚಾಮುಂಡೇಶ್ವರಿ ದೇವಿ ಸುತ್ತಾ ನಡೆದಿರುವ ಬೆಳವಣಿಗೆಯಿಂದ ನೋವಾಗಿದೆ ಎಂದು ರಾಜವಶಂಸ್ಥೆ ಪ್ರಮೋದಾದೇವಿ ಒಡೆಯರ್ ಹೇಳಿದರು.
ಇಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚಾಮುಂಡಿ ಯದುವಂಶದ ಮನೆ ದೇವರು. ನಮ್ಮ ಕುಲದೇವಿ. ಯದುವಂಶಕ್ಕೆ ಚಾಮುಂಡಿ ದೇವಿ ಧಾರ್ಮಿಕ ತಾಯಿ ಇದ್ದಂತೆ. ದೇವಸ್ಥಾನದಲ್ಲಿ ಹಿಂದೂ ಧಾರ್ಮಿಕ ವಿಧಿ-ವಿಧಾನದಂತೆಯೇ ಪೂಜೆ ನಡೆಯುತ್ತದೆ ಎಂದರು.
ರಾಜಕಾರಣಿಗಳು ಏನು ಹೇಳಿದರು, ಅವರು ಹೇಳಿದಂತೆಲ್ಲಾ ಆಗುವುದಿಲ್ಲ ಎಂದು ಡಿಕೆ ಶಿವಕುಮಾರ್ ಹೆಸರು ಹೇಳದೆ ಪ್ರತಿಕ್ರಿಯಿಸಿದರು.
ನಮ್ಮ ಮನೆತನ ಹಾಗೂ ದೇವಸ್ಥಾನದ ವಿಚಾರದಲ್ಲಿ ನ್ಯಾಯಾಲಯದಲ್ಲಿ ಹೋರಾಟ ಮಾಡುತ್ತಿದ್ದೇವೆ. ಚಾಮುಂಡಿ ಬೆಟ್ಟದ ದೇವಸ್ಥಾನಕ್ಕೆ ಸಂಬಂಧಿಸಿ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಿದ್ದರೂ ಅದು ಅಧಿಕೃತವಲ್ಲ. ನ್ಯಾಯಾಲಯದ ಆದೇಶ ಬಂದ ಮೇಲಷ್ಟೆ ಎಲ್ಲವೂ ಸ್ಪಷ್ಟ ಆಗುತ್ತದೆ ಎಂದು ಹೇಳಿದರು.
70 ವರ್ಷಗಳಿಂದ ಈ ಹೋರಾಟ ನಡೆದಿದ್ದು, ಎಲ್ಲವೂ ನ್ಯಾಯಾಲಯದಲ್ಲಿದೆ ಎಂದರು.
ದಸರಾ ಉದ್ಘಾಟಕರ ವಿಚಾರದಲ್ಲಿ ನನ್ನ ಅಭಿಪ್ರಾಯವೇನೂ ಇಲ್ಲ. ಕರೆದವರು, ಕರೆಸಿಕೊಂಡವರಿಗಷ್ಟೇ ಅದು ಗೊತ್ತು. ಸರ್ಕಾರದ ದಸರಾ ನಮ್ಮ ಪರಂಪರೆಯ ಭಾಗವಲ್ಲ. ನಮ್ಮ ದಸರಾ ಖಾಸಗಿಯಾಗಿಯೇ ನಡೆಯುತ್ತದೆ. ಸರ್ಕಾರದವರು ಅವರಿಗೆ ಬೇಕಾದ ರೀತಿ ದಸರಾ ಮಾಡುತ್ತಾರೆ. ಅದಕ್ಕೂ-ನಮಗೂ ಸಂಬಂಧ ಇಲ್ಲ ಎಂದರು.