Publish Date: Mon, 03 Jan 2022 (21:00 IST)
Updated Date: Mon, 03 Jan 2022 (21:05 IST)
ಮಡಿಕೇರಿ:-ರಾಜ್ಯದ ಎಷ್ಟೋ ದೇವಾಲಯಗಳಲ್ಲಿ ಇಂದು ಎಣ್ಣೆ, ಬತ್ತಿಗೂ ಹಣವಿಲ್ಲದ ಪರಿಸ್ಥಿತಿ ಇದೆ, ಇಂತಹ ದೇವಸ್ಥಾನಗಳನ್ನು ಸರ್ಕಾರ ಹಿಡಿತದಿಂದ ಸ್ವತಂತ್ರಗೊಳಿಸಿದರೆ ಒಂದಿಷ್ಟು ಅಭಿವೃದ್ಧಿಯಾಗಲಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಭಿಪ್ರಾಯಪಟ್ಟಿದ್ದಾರೆ.
ಪಾಲಿಬೆಟ್ಟದ ಸುದ್ದಿಗಾರರೊಂದಿಗೆ ಅವರು, ರಾಜ್ಯದ ಎಷ್ಟೋ ಹಿಂದೂ ದೇವಾಲಯಗಳಲ್ಲಿ ಇಂದು ಎಣ್ಣೆ,ಬತ್ತಿಗೂ ಹಣವಿಲ್ಲದ ಪರಿಸ್ಥಿತಿ ಎದುರಿಸುತ್ತಿದೆ, ಅಂತಹ ದೇವಾಲಯಗಳನ್ನು ಭಕ್ತರ ಕೈಗೆ ತಪ್ಪೇನಿಲ್ಲ ಎಂದು ನುಡಿದರು.
ಹಿಂದೂ ದೇವಾಲಯಗಳ ಆಸ್ತಿಯನ್ನು ಖಾಸಗೀಕರಣ ಮಾಡುವ ಉದ್ದೇಶದಿಂದ, ಸರ್ಕಾರದ ಹಿಡಿತದಿಂದ ಸ್ವಾತಂತ್ರ್ಯಗೊಳಿಸಲಾಗುತ್ತಿದೆ ಎಂಬ ಸಿದ್ದರಾಮಯ್ಯನವರ ಹೇಳಿಕೆಗೆ ತಿರುಗೇಟು ನೀಡಿದ ಅವರು, ಹಿಂದೂ ದೇವಾಲಯಗಳನ್ನು ಸ್ವಾತಂತ್ರ್ಯಗೊಳಿಸಿ ಎಂದು ಸಿದ್ದರಾಮಯ್ಯನವರು ಕೇಳಬೇಕಿತ್ತು. ಆದರೆ ಅವರು ಯಾಕೆ ವಿರೋಧ ಮಾಡುತ್ತಿದ್ದಾರೆ ಎಂದು ತಿಳಿಯುತ್ತಿಲ್ಲ. ಮಸೀದಿ ಹಾಗೂ ಚರ್ಚ್'ಗಳು ಆಯಾ ಸಮುದಾಯಗಳ ಆಡಳಿತದಲ್ಲಿದೆ. ಆದರೆ ಹಿಂದೂ ದೇವಾಲಯಗಳು ಮಾತ್ರ ಏಕೆ ಸರ್ಕಾರದ ಆಡಳಿತದಲ್ಲಿವೆ ಎಂದು ಕೋಟ ಶ್ರೀನಿವಾಸ ಪೂಜಾರಿ ಮರು ಪ್ರಶ್ನಿಸಿದರು.
ಸಾಮಾಜಿಕ ನ್ಯಾಯಕ್ಕೆ ಧಕ್ಕೆಯಾದಾಗ, ಆರ್ಥಿಕ ಅಪರಾಧಗಳಾದಾಗ ಸರ್ಕಾರ ಕ್ರಮ ಕೈಗೊಳ್ಳುತ್ತದೆ. ಆದರೆ ಕಾಂಗ್ರೆಸ್ನವರು ಈ ವಿಚಾರದಲ್ಲಿ ಯಾಕೆ ಭಯಗೊಳ್ಳುತ್ತಿದ್ದಾರೋ ಗೊತ್ತಿಲ್ಲ ಎಂದು ಟೀಕಿಸಿದರು.
ಶೇ.5ರಷ್ಟಾದರೆ ಲಾಕ್ಡೌನ್: ಕೊಡಗು ಜಿಲ್ಲೆಯಲ್ಲಿ ಸದ್ಯ ಪಾಸಿಟಿವಿಟಿ ದರ ಶೇ.1ರಷ್ಟಿದೆ. ಅದು ಶೇ.೫ ರಷ್ಟಾದರೆ ಲಾಕ್ಡೌನ್ ಮಾಡುವುದು ಅನಿವಾರ್ಯವಲ್ಲ. ಅಂತಹ ಸ್ಥಿತಿಗೆ ಜನರು ಅವಕಾಶ ಕೊಡಬಾರದು. ರಾಜ್ಯದ ಕೆಲವು ಕಡೆಗಳಲ್ಲಿ ಪಾಸಿಟಿವಿಟಿ ದರ ಶೇ.1ಕ್ಕಿಂತ ಜಾಸ್ತಿ ಇದೆ. ಅದು ಇನ್ನಷ್ಟು ಜಾಸ್ತಿ ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಅವರು ಇದೇ ಸಂದರ್ಭ ಲಾಕ್ ಡೌನ್ ಕುರಿತ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.