Publish Date: Thu, 09 Dec 2021 (14:12 IST)
Updated Date: Thu, 09 Dec 2021 (14:14 IST)
ರಾಜ್ಯದಲ್ಲಿ ದಿನ ಕಳೆದಂತೆ ಕೊರೊನಾ ಸೋಂಕು ಪ್ರಕರಣಗಳಲ್ಲಿ ಏರಿಕೆ ಕಂಡುಬರುತ್ತಿರುವುದರಿಂದ ಕೊರೊನಾ ಮೂರನೆ ಅಲೆ ಭೀತಿ ಕಾಡಲಾರಂಬಿಸಿದೆ. ಓಮಿಕ್ರಾನ್ ರೂಪಾಂತರ ಕಾಣಿಸಿಕೊಂಡ ನಂತರ ಕೊರೊನಾ ಸೋಂಕು ಏರಿಕೆಯಾಗುತ್ತಿರುವುದರಿಂದ ಎಲ್ಲೆಡೆ ಭೀತಿ ಅರಂಭವಾಗಿರುವುದರಿಂದ ಆರೋಗ್ಯ ಇಲಾಖೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ.ಹಿಂದೆ 10ಕ್ಕೂ ಹೆಚ್ಚು ಸೋಂಕಿತರು ಕಂಡು ಬಂದ ಸ್ಥಳಗಳನ್ನು ಕ್ಲಸ್ಟರ್ ಎಂದು ಘೋಷಣೆ ಮಾಡಲಾಗುತ್ತಿತ್ತು. ಓಮಿಕ್ರಾನ್ ಕಾಣಿಸಿಕೊಂಡ ನಂತರ ಕೇವಲ ಮೂರು ಸೋಂಕಿತರು ಪತ್ತೆಯಾದ ಸ್ಥಳವನ್ನು ಕ್ಲಸ್ಟರ್ ಎಂದು ಘೋಷಣೆ ಮಾಡಲು ತೀರ್ಮಾನಿಸಲಾಗಿದೆ. ಹೀಗಾಗಿ ಕಳೆದ ನಾಲ್ಕು ವಾರಗಳಲ್ಲಿ ಕ್ಲಸ್ಟರ್ಗಳ ಸಂಖ್ಯೆ 40ಕ್ಕೆ ಏರಿಕೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.
40 ಕ್ಲಸ್ಟರ್ಗಳಿಂದ 20500 ಸ್ಯಾಂಪಲ್ ಸಂಗ್ರಹಿಸಿ ಜಿನೋಮಿಕ್ ಸೀಕ್ವೆನ್ಸಿ ಪರೀಕ್ಷೆಗೆ ರವಾನಿಸಲಾಗಿದ್ದು, ವರದಿಗಾಗಿ ಕಾಯಲಾಗುತ್ತಿದೆ. ವರದಿ ಬಂದ ನಂತರ ಎಷ್ಟು ಮಂದಿಗೆ ಓಮಿಕ್ರಾನ್ ವೈರಾಣು ಒಕ್ಕರಿಸಿದೆ ಎನ್ನುವುದು ಸಾಬೀತಾಗಲಿದೆ.
ಕಳೆದ ಒಂದು ತಿಂಗಳಿನಿಂದ ನಿನ್ನೆಯವರೆಗೆ ರಾಜ್ಯದಲ್ಲಿ ಬರೋಬ್ಬರಿ 8073 ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಅದರಲ್ಲೂ ತುಮಕೂರು, ಧಾರಾವಾಡ, ಬೆಂಗಳೂರು ಹಾಗೂ ಮೈಸೂರಿನಲ್ಲಿ ಹೆಚ್ಚು ಸೋಂಕಿತರು ಪತ್ತೆಯಾಗಿದ್ದಾರೆ. ಹೀಗಾಗಿ ಈ ನಾಲ್ಕು ಜಿಲ್ಲೆಗಳಲ್ಲಿ ಅತಿ ಹೆಚ್ಚು ಕ್ಲಸ್ಟರ್ಗಳನ್ನು ಘೋಷಿಸಲಾಗಿದೆ.