Publish Date: Thu, 03 Aug 2023 (08:16 IST)
Updated Date: Thu, 03 Aug 2023 (08:17 IST)
ಚಿಕ್ಕಬಳ್ಳಾಪುರ : ಜಿಲ್ಲೆಯ ವೈದ್ಯಕೀಯ ಕಾಲೇಜು ನಿರ್ಮಾಣ ವಿಚಾರದಲ್ಲಿ ಯಾವ ತನಿಖೆ ಬೇಕಾದರೂ ಮಾಡಿ. ಆದರೆ ಆದಷ್ಟು ಬೇಗ ಕಾಲೇಜು ಕಟ್ಟಡ ಹ್ಯಾಂಡ್ ಓವರ್ ಮಾಡಿಕೊಳ್ಳಿ. ಇಲ್ಲವಾದರೆ ನಾನು ಮೆಡಿಕಲ್ ಕಾಲೇಜು ಮುಂದೆಯೇ ಉಪವಾಸ ಸತ್ಯಾಗ್ರಹ ಮಾಡುತ್ತೇನೆ ಎಂದು ಮಾಜಿ ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಹೇಳಿದ್ದಾರೆ.
ಚಿಕ್ಕಬಳ್ಳಾಪುರ ನಗರದ ಗೃಹಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲಾ ಉಸ್ತುವಾರಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ ಸುಧಾಕರ್ ವಿರುದ್ಧ ವಾಗ್ದಾಳಿ ನಡೆಸಿದರು. ಮಂತ್ರಿಗಳಾಗಿ ಎರಡು ತಿಂಗಳಾಗಿದೆ. ಜಿಲ್ಲಾಸ್ಪತ್ರೆಗೆ ಎಷ್ಟು ಬಾರಿ ಭೇಟಿ ಕೊಟ್ಟಿದ್ದೀರಿ. ಜಿಲ್ಲಾಸ್ಪತ್ರೆಯಲ್ಲಿ ಎಷ್ಟು ಐಸಿಯುಗಳಿವೆ ನಿಮಗೆ ಗೊತ್ತಾ. ನೀವು ಸಹ ವೈದ್ಯರಾಗಿದ್ದೀರಿ, ನಿಮಗೆ ಜವಾಬ್ದಾರಿ ಇಲ್ಲವಾ ಅಂತ ವಾಗ್ದಾಳಿ ನಡೆಸಿದರು.
ನಾನು ಬಹಳ ಗಲಾಟೆ ಮಾಡಿ ಮೆಡಿಕಲ್ ಕಾಲೇಜು ತಂದಿದ್ದೇನೆ. ಶೀಘ್ರದಲ್ಲೇ ಕಾಲೇಜು ಆರಂಭ ಮಾಡಿ. ನಮ್ಮ ಜಿಲ್ಲೆಯಲ್ಲಿ ಆದ ಕಟ್ಟೆ ರಾಜ್ಯದಲ್ಲಿ ಎಲ್ಲೂ ಆಗಿಲ್ಲ. ಹೀಗಾಗಿ ನಿಮಗೆ ಹೊಟ್ಟೆ ಉರಿನಾ..? ನಾವ್ ಮಾಡೋಕೆ ಅಗಿಲ್ಲ ಅಂತ ಹೊಟ್ಟೆ ಉರಿನಾ..? ಒಳ್ಳೆಯ ಕೆಲಸ ಮಾಡಿದ್ರೂ ಸಹಿಸಲ್ಲ. ಕಾಲೇಜು ಪ್ರಾರಂಭ ಮಾಡದಿದ್ದರೆ ನಾನು ಮೆಡಿಕಲ್ ಕಾಲೇಜು ಮುಂದೆಯೇ ಉಪವಾಸ ಸತ್ಯಾಗ್ರಹ ಮಾಡುತ್ತೇನೆ ಎಂದರು.