Publish Date: Fri, 22 Oct 2021 (17:06 IST)
Updated Date: Fri, 22 Oct 2021 (20:09 IST)
ಹಾವೇರಿ : ಹಾನಗಲ್ ತಾಲೂಕಿನ ಬೆಳಗಾಲಪೆಟೆ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ ಪರ ನಡೆದ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು, ಕಾಂಗ್ರೆಸ್ ಗೆ ಡಿಪಾಸಿಟ್ ಹೋಗಬೇಕು.
ಆ ಕೆಲಸವನ್ನು ನೀವು ಮಾಡಿ. ಬಹುತೇಕ ವರ್ಷ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಒಂದು ಕಾಲದಲ್ಲಿ ದೆಹಲಿಗೆ ಹೋಗಿ ಟಿಕೆಟ್ ತಂದ್ರೆ ಗೆಲ್ಲೋದು ನೂರಕ್ಕೆ ನೂರು ನಿಶ್ಚಿತ ಅನ್ನೋ ಕಾಲವಿತ್ತು. ಅವರ ದುರಾಡಳಿತದಿಂದ ಬೇಸತ್ತು ಈಗ ಕೇವಲ 44 ಸಂಸದರಿದ್ದಾರೆ ಎಂದು ಟೀಕಿಸಿದರು.
ದೇಶದ ಅನೇಕ ರಾಜ್ಯಗಳಲ್ಲಿ ಬಿಜೆಪಿ ಸರಕಾರವಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವೈಖರಿಯನ್ನು ಈಡಿ ಪ್ರಪಂಚ ಅಚ್ಚರಿಯಿಂದ ನೋಡ್ತಿದೆ. ನಮ್ಮ ಕಾಂಗ್ರೆಸ್ ನ ಸ್ನೇಹಿತರು ಹಣ, ಹೆಂಡ, ಅಧಿಕಾರದ ಬಲದಿಂದ ಚುನಾವಣೆ ಗೆಲ್ತಿದ್ರು. ಪ್ರಧಾನಿ ಮೋದಿ ಅವರ ಆಡಳಿತದ ಪರಿಣಾಮ ಈಗ ಎಲ್ಲಿದೆ ಕಾಂಗ್ರೆಸ್, ಎಲ್ಲಿದ್ದಾರೆ ನಿಮ್ಮ ನಾಯಕರು ಎಂಬಂತಾಗಿದೆ. ಎಲ್ಲೋ ಸ್ವಲ್ಪ ಕರ್ನಾಟಕದಲ್ಲಿ ಉಸಿರಾಡ್ತಿದೆ. ಅದಕ್ಕೆ ಧಿಮಾಕಿನಿಂದ ಮಾತಾಡ್ತಿದ್ದಾರೆ. ಒಂದು ಕಾಲದಲ್ಲಿ ಜನರು ಕಣ್ಣು ಮುಚ್ಕೊಂಡು ವೋಟು ಹಾಕುತ್ತಿದ್ದರು. ಎಲ್ಲರಿಗೂ ಒಂದೇ ವೋಟು ಅನ್ನೋದು ಅಂಬೇಡ್ಕರ್ ಕೊಟ್ಟರು. ಇಲ್ಲಿರೋ ಬಹುತೇಕರು ಬಿಜೆಪಿಯ ಹಿತೈಷಿಗಳು, ಕಾರ್ಯಕರ್ತರೆ ಬಂದಿದ್ದೀರಿ. ಒಂದು ವಾರ ಪ್ರಧಾನಿ ಮೋದಿ ಅವರ ಕಾಣಿಕೆ, ಬೊಮ್ಮಾಯಿ ಸರಕಾರದ ಕಾಣಿಕೆ ಏನು, ಯಡಿಯೂರಪ್ಪ ಕೊಟ್ಟ ಕಾಣಿಕೆ ಏನು ಅನ್ನೋದನ್ನ ಜನರಿಗೆ ತಿಳಿಸಬೇಕು ಎಂದು ಕಾರ್ಯಕರ್ತರಿಗೆ ಯಡಿಯೂರಪ್ಪ ಅವರು ಕರೆ ನೀಡಿದರು.