Publish Date: Fri, 06 Jul 2018 (16:36 IST)
Updated Date: Fri, 06 Jul 2018 (16:43 IST)
ಮಾರಣಾಂತಿಕ ಹೃದಯ ಸಂಬಂಧಿಯಿಂದ ಕಾಯಿಲೆಯಿಂದ ಬಳಲುತ್ತಿದ್ದ ಮಗಳನ್ನು ಬದುಕಿಸಿಕೊಳ್ಳಲು ಹೆತ್ತವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಬದಲೀ ಹೃದಯ ಜೋಡಿಸಿದರಷ್ಟೇ ನಿಮ್ಮ ಮಗಳು ಬದುಕುಳಿಯಲು ಸಾಧ್ಯ ಎಂದು ವೈದ್ಯರು ಹೇಳಿದ ಮೇಲಂತೂ, ತಂದೆ-ತಾಯಿ ಅಕ್ಷರಶಃ ಕುಸಿದು ಹೋಗಿದ್ದರು. ಅದೃಷ್ಟವಶಾತ್ ಸಿರಿ ಅನ್ನೋ ಹಾಸನದ 10 ವರ್ಷದ ಬಾಲೆ, ಸಾವು ಸನ್ನಿಹಿತ ಅನ್ನುವಷ್ಟರಲ್ಲೇ ಅದೇ ವಯೋಮಾನದ ಜೀವಂತ ಪುಟ್ಟ ಹೃದಯ ಸಿಕ್ಕಿದ್ದರಿಂದ, ಬಾಲಕಿ ಸಾವಿನ ದವಡೆಯಿಂದ ಪಾರಾಗಿದ್ದಾಳೆ.
ಮರುಹುಟ್ಟು ಪಡೆದ ಸಿರಿಯ ಪುನರಾಗಮನ ಹೆತ್ತವರು ಮತ್ತು ಸ್ಥಳೀಯವರ ಆನಂದ, ಸಂಭ್ರಮಕೆ ಪಾರವೇ ಇಲ್ಲದಂತಾಗಿದೆ.ಮತ್ತೊಂದು ವಿಶೇಷ ಎಂದ್ರೆ ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ 10 ವರ್ಷದ ಬಾಲಕಿಗೆ ಬದಲಿ ಹೃದಯ ಶಸ್ತ್ರಚಿಕಿತ್ಸೆ ಮಾಡಿರುವುದು ಇದೇ ಮೊದಲು ಎನ್ನಲಾಗಿದೆ.
6 ನೇ ತರಗತಿ ಓದುತ್ತಿರುವ ಸಿರಿಗೆ ಹೃದಯ ಸಂಬಂಧಿ ಕಾಯಿಲೆ ಕಾಣಿಸಿಕೊಂಡಿತು. ಅದು ಎಷ್ಟು ಗಂಭೀರವಾಗಿತ್ತು ಎಂದ್ರೆ ಬದಲೀ ಹೃದಯ ಜೋಡಿಸದಿದ್ರೆ ಸಿರಿ, ಬದುಕುಳಿಯುವುದೇ ಕಷ್ಟವಾಗಿತ್ತು. ಹೇಗಾದ್ರೂ ಮಾಡಿ ಮಗಳನ್ನು ಬದುಕಿಸಿಕೊಳ್ಳಬೇಕು ಅಂತ ಹೆತ್ತವರು, ಅನೇಕ ಕಡೆ ಸುತ್ತಾಡಿದ್ರೂ, ಎಲ್ಲೂ ಕೂಡ ಸಿರಿಗೆ ಮ್ಯಾಚ್ ಆಗುವ ಹೃದಯ ಸಿಗಲೇ ಇಲ್ಲ. ಅಲ್ಲಿಗೆ ಸಿರಿ ಬದುಕುಳಿಯುವುದು ಕಷ್ಟ ಎಂಬ ಪರಿಸ್ಥಿತಿ ನಿರ್ಮಾಣವಾಗಿತ್ತು. ಮಗಳು ಬದುಕದೇ ಇದ್ರೆ ನಮಗೂ ಜೀವನ ಬೇಡ ಅನ್ನೋ ಕಠಿಣ ನಿರ್ಧಾರಕ್ಕೆ ಪೋಷಕರು ಬಂದು ಬಿಟ್ಟಿದ್ದರು.
ಎಲ್ಲಾ ಕಡೆ ಅಲೆದು ಕೊನೆಗೆ ಕಳೆದ ಜನವರಿಯಲ್ಲಿ ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ಮಗಳನ್ನು ದಾಖಲು ಮಾಡಿದರು. ಆಗಲೂ ಸಿರಿಗೆ ಹೊಂದುವ ಹೃದಯ ಸಿಗಲೇ ಇಲ್ಲ. ಆದ್ರೆ ಕಳೆದ ಮಾರ್ಚ್ 13 ರಂದು ಮಾಗಡಿ ಮೂಲದ 10 ವರ್ಷದ ಬಾಲಕ ಅಪಘಾತದಿಂದ ಮೃತಪಟ್ಟ. ಬಾಲಕನ ಪೋಷಕರು ಉದಾರತೆಯಿಂದ ಆ ಹೃದಯ ಪಡೆದ ನಾರಾಯಣ ಹೃದಯಾಲಯದ ವೈದ್ಯರ ತಂಡ, ಯಶಸ್ವಿಯಾಗಿ ಸಿರಿಗೆ ಹೃದಯ ಜೋಡಣೆ ಮಾಡಿತು. ಅದೃಷ್ಟವಶಾತ್ ಬಾಲಕನ ಪುಟ್ಟ ಹೃದಯ, ಸಿರಿಗೆ ಮ್ಯಾಚ್ ಆಗಿದ್ದರಿಂದ, ಸಾವಿನ ದವಡೆಯಿಂದ ಬಾಲಕಿ ಪಾರಾಗಿದ್ದಾಳೆ.