Publish Date: Mon, 16 Sep 2024 (10:51 IST)
Updated Date: Mon, 16 Sep 2024 (10:58 IST)
ಬಂಟ್ವಾಳ: ಈದ್ ಮೆರವಣಿಗೆಗೆ ಮುನ್ನ ತಾಕತ್ತಿದ್ದರೆ ಬಿಸಿ ರೋಡ್ ಗೆ ಬನ್ನಿ ಎಂದು ಸವಾಲು ಹಾಕಿದ್ದ ಮುಸ್ಲಿಂ ಮುಖಂಡರಿಗೆ ಹಿಂದೂ ಕಾರ್ಯಕರ್ತರು ತಕ್ಕ ಉತ್ತರ ನೀಡಲು ಇಂದು ಬಿಸಿ ರೋಡ್ ಚಲೋ ಪ್ರತಿಭಟನೆ ನಡೆಸಿದ್ದಾರೆ.
ಮೊನ್ನೆಯಷ್ಟೇ ನಾಗಮಂಗಲದಲ್ಲಿ ಗಣೇಶ ಮೆರವಣಿಗೆ ವೇಳೆ ಅನ್ಯ ಕೋಮಿನ ಕೆಲವು ಯುವಕರು ಕಲ್ಲು ತೂರಾಟ ನಡೆಸಿದ್ದರು. ಇದಾದ ಬಳಿಕ ಸ್ಥಳದಲ್ಲಿ ಕೋಮುಗಲಭೆ ಏರ್ಪಟ್ಟಿತ್ತು. ಇದರ ಬೆನ್ನಲ್ಲೇ ವಿಎಚ್ ಪಿ ನಾಯಕ ಶರಣ್ ಪಂಪ್ ವೆಲ್ ನಾವು ಈದ್ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಿದರೆ ಹೇಗಿರುತ್ತದೆ ಎಂದಿದ್ದರು.
ಇದರ ಬೆನ್ನಲ್ಲೇ ನಿನ್ನೆ ಸಂಜೆ ಕೆಲವು ಮುಸ್ಲಿಂ ಮುಖಂಡರು ಪ್ರಚೋದನಕಾರಿಯಾಗಿ ಮಾತನಾಡಿದ್ದರು. ತಾಕತ್ತಿದ್ದರೆ ಬಿಸಿ ರೋಡ್ ಗೆ ಬನ್ನಿ ಎಂದಿದ್ದರು. ಇದಕ್ಕೆ ಇಂದು ಹಿಂದೂ ಕಾರ್ಯಕರ್ತರು ಶರಣ್ ಪಂಪ್ ವೆಲ್ ನೇತೃತ್ವದಲ್ಲಿ ಬಿಸಿ ರೋಡ್ ಗೆ ನುಗ್ಗಿದ್ದಾರೆ. ಕರಾವಳಿಯಲ್ಲಿ ಹಿಂದೂ ಕಾರ್ಯಕರ್ತರಿಗೆ ಇಂತಹ ಸವಾಲುಗಳು ಹೊಸದೇನಲ್ಲ. ಈ ಹಿಂದೆಯೂ ಹಲವು ಬಾರಿ ಇಂತಹ ಸವಾಲು ಬಂದಿತ್ತು. ಆಗಲೂ ನಾವು ಸರಿಯಾಗಿ ಉತ್ತರ ಕೊಟ್ಟಿದ್ದೆವು. ಈಗಲೂ ಉತ್ತರ ಕೊಡುತ್ತೇವೆ ಎಂದು ಶರಣ್ ಪಂಪ್ ವೆಲ್ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ್ದಾರೆ.
ಇನ್ನು, ಶರಣ್ ಪಂಪ್ ವೆಲ್ ಗೆ ಜೀವಬೆದರಿಕೆಯೂ ಬಂದಿದೆ ಎನ್ನಲಾಗಿದೆ. ಇಂತಹವರಿಗೆ ತಕ್ಕ ಉತ್ತರ ಕೊಡಲಿದ್ದೇವೆ ಎಂದು ಹಿಂದೂ ಕಾರ್ಯಕರ್ತರು ತೊಡೆತಟ್ಟಿದ್ದಾರೆ. ಇದರ ಬೆನ್ನಲ್ಲೇ ಈಗ ಪೊಲೀಸರಿಗೆ ಹೊಸ ತಲೆನೋವು ಶುರುವಾಗಿದೆ. ಮತ್ತೆ ನಾಗಮಂಗಲದಂತಹ ಗಲಭೆಯಾಗದಂತೆ ತಡೆಯುವುದೇ ಸವಾಲಾಗಿದೆ.