Publish Date: Sun, 24 Mar 2024 (12:56 IST)
Updated Date: Sun, 24 Mar 2024 (12:58 IST)
ಬೆಂಗಳೂರು: ಹೃದಯ ಸಂಬಂಧೀ ಚಿಕಿತ್ಸೆಗಾಗಿ ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಜೆಡಿಎಸ್ ನಾಯಕ, ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಕುಮಾರಸ್ವಾಮಿ ಮಾರ್ಚ್ 22 ರಂದು ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ಹೃದಯ ಸಂಬಂಧೀ ಚಿಕಿತ್ಸೆಗೊಳಗಾಗಿದ್ದರು. ಇದಾಗಿ ಎರಡು ದಿನಗಳ ಕಾಲ ಅವರನ್ನು ಆಸ್ಪತ್ರೆಯಲ್ಲೇ ಇರಿಸಲಾಗಿತ್ತು. ಇದೀಗ ಅವರನ್ನು ಡಿಸ್ಚಾರ್ಜ್ ಮಾಡಲಾಗಿದೆ. ತಕ್ಷಣವೇ ಅವರು ಬೆಂಗಳೂರಿಗೆ ಬಂದಿಳಿದಿದ್ದಾರೆ.
ಬೆಂಗಳೂರಿಗೆ ಬಂದ ಮೇಲೆ ಮಾಧ್ಯಮಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಅಭಿಮಾನಿಗಳು,ಹಿತೈಷಿಗಳ ಹಾರೈಕೆಯ ಫಲ ನಾನು ಗುಣಮುಖನಾಗಿ ಬಂದಿದ್ದೇನೆ. ಸಾಯಿ ಬಾಬ ಬಂದು ಆಪರೇಷನ್ ಮಾಡಿದ್ರು ಎಂದು ಸ್ವತಃ ವೈದ್ಯರೇ ಹೇಳಿದ್ದಾರೆ. ಇನ್ನು ಮೂರು-ನಾಲ್ಕು ದಿನ ವಿಶ್ರಾಂತಿ ಪಡೆಯಲಿದ್ದೇನೆ ಎಂದಿದ್ದಾರೆ.
ಚೆನ್ನೈ ವಿಮಾನವೇರುವ ಮುನ್ನ ಕುಮಾರಸ್ವಾಮಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಬಂದ ಬಳಿಕ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಳ್ಳುವುದಾಗಿ ಹೇಳಿದ್ದರು. ಅದರಂತೆ ಈಗ ಮೂರ್ನಾಲ್ಕು ದಿನಗಳ ಕಾಲ ವಿಶ್ರಾಂತಿ ಪಡೆದ ಬಳಿಕ ನನ್ನ ಕೈಲಾದ ರೀತಿಯಲ್ಲಿ ಪ್ರಚಾರದಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂದಿದ್ದಾರೆ.