ಬೆಂಗಳೂರು: ಅಬಕಾರಿ ಹಗರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶದ ಮಾಜಿ ಸಚಿವ ಚೆವಿ ರೆಡ್ಡಿ ಅವರನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ.
ಮದ್ಯ ಹಗರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಸಮೀಪದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವೈಎಸ್ಆರ್ ಕಾಂಗ್ರೆಸ್ನ ಮುಖಂಡ ಚೆವಿ ರೆಡ್ಡಿ ಭಾಸ್ಕರ್ ರೆಡ್ಡಿ ಅವರನ್ನು ಬಂಧಿಸಲಾಗಿದೆ.
ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ(ಎಸ್ಐಟಿ) ಚಂದ್ರಗಿರಿಯ ಮಾಜಿ ಶಾಸಕ ಚೆವಿ ರೆಡ್ಡಿ ಅವರ ವಿರುದ್ಧ ಲುಕೌಟ್ ನೋಟಿಸ್ ಜಾರಿ ಮಾಡಿದ್ದ ಹಿನ್ನೆಲೆಯಲ್ಲಿ ಮಂಗಳವಾರ ಬೆಂಗಳೂರಿನಲ್ಲಿ ಬಂಧಿಸಲಾಯಿತು.
ಜಗನ್ ಮೋಹನ್ ರೆಡ್ಡಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಚಂದ್ರಗಿರಿ ಶಾಸಕರಾಗಿದ್ದ ಚೆವಿ ರೆಡ್ಡಿ ಭಾಸ್ಕರ್ ರೆಡ್ಡಿ ವಿದೇಶಕ್ಕೆ ಅಕ್ರಮವಾಗಿ ತೆರಳಲು ಯತ್ನಿಸುತ್ತಿದ್ದರು. ಆಂಧ್ರಪ್ರದೇಶದ ಅಬಕಾರಿ ಹಗರಣದ ಆರೋಪಿ ಆಗಿರುವ ಚೆವಿ ರೆಡ್ಡಿ ವಿರುದ್ಧ ಲುಕೌಟ್ ನೋಟಿಸ್ ನೀಡಿದ್ದ ಕಾರಣ ಅವರನ್ನು ಬಂಧಿಸಲಾಗಿದೆ.
ಮಂಗಳವಾರ ಮಧ್ಯರಾತ್ರಿ ಆಂಧ್ರಪ್ರದೇಶ ಪೊಲೀಸರಿಗೆ ಚೆವಿ ರೆಡ್ಡಿಅವರನ್ನು ಹಸ್ತಾಂತರಿಸಲಾಗಿದೆ. ಆಂಧ್ರಪ್ರದೇಶದ ಎಎಸ್ಪಿ ಮಹೇಶ್ ಅವರಿಗೆ ಚೆವಿ ರೆಡ್ಡಿ ಅವರನ್ನು ಹಸ್ತಾಂತರಿಸಲಾಗಿದ್ದು, ಆಂಧ್ರಪ್ರದೇಶ ಪೊಲೀಸರು ಕರೆದುಕೊಂಡು ಹೋಗಿದ್ದಾರೆ.